ಬಿಜೆಪಿ ವಿರುದ್ಧ ನಾಡಿನ ಜನ ದಂಗೆ ಏಳಬೇಕು: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-20 14:57 GMT

ಹಾಸನ,ಸೆ.20: ಸಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇವರ ವಿರುದ್ಧ ನಾಡಿನ ಜನ ಧಂಗೆ ಏಳಬೇಕು. ಈ ಪುಣ್ಯ ಭೂಮಿಯಿಂದಲೇ ನಾನು ಧಂಗೆಗೆ ಕರೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಹೇಳಿದರು.

ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ ಅವರು, ಜನಪರ ಸರ್ಕಾರವನ್ನು ಉರುಳಿಸಲು ಕುತಂತ್ರ ನಡೆಸುತ್ತಿರುವ ಬಿಜೆಪಿ ವಿರುದ್ಧ ನಾಡಿನ ಜನತೆ ಧಂಗೆ ಏಳಬೇಕು ಎಂದರು. ನನ್ನಿಂದ ಏನಾದರೂ ತಪ್ಪಾಗಿದ್ದರೆ ಅಥವಾ ನಾನೇದರೂ ನಿಮಗೆ ದ್ರೋಹವನ್ನು ಮಾಡಿದ್ದರೆ, ಈ ನಾಡಿನ ಜನತೆ ನನ್ನ ವಿರುದ್ಧವೂ ದಂಗೆ ಏಳಲಿ ಎಂದು ಹೇಳಿದರು.

ನಾನು ಮಜಾ-ಮೋಜು ಮಾಡಲು ಮುಖ್ಯಮಂತ್ರಿ ಆಗಿಲ್ಲ. ನಾಡಿನ ಯುವಕರು, ಮಹಿಳೆಯರು ಹಾಗೂ ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಲು ಶಾಶ್ವತ ವ್ಯವಸ್ಥೆ ಮಾಡುವುದು ನನ್ನ ಕನಸಾಗಿದೆ. ಸರಕಾರ ರೈತರ 45 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ. ಇನ್ನು ಸ್ವಲ್ಪ ದಿನಗಳಲ್ಲಿ ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಒಂದು ಲಕ್ಷದ ವರೆಗಿನ ಸುಮಾರು 9,450 ಕೋಟಿ ರೂಪಾಯಿ ಚಾಲ್ತಿ ಸಾಲಮನ್ನಾಗೆ ಆದೇಶ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಆದೇಶ ಹೊರಬೀಳಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಮಾದ್ಯಮಗಳು ಸದಾ ಸರ್ಕಾರ ಬೀಳುತ್ತದೆ ಎನ್ನುವ ಸುದ್ಧಿ ಪ್ರಸಾರ ಮಾಡುತ್ತಿದೆ. ಮಾಧ್ಯಮಗಳು ಮೊದಲು ನನ್ನ ಕಾರ್ಯಕ್ರಮವನ್ನು ಅರ್ಥ ಮಾಡಿಕೊಳ್ಳಬೇಕು. ಹಣದಿಂದ ಸರಕಾರ ಉರುಳಿಸಲು ಸಾಧ್ಯವಿಲ್ಲವೆಂದು ಹೇಳಿದರು.

ನಮ್ಮ ಕುಟುಂಬದ ಮೇಲೆ ಜಿಲ್ಲೆಯ ಋಣಭಾರ ಬಹಳ ಇದೆ. ದೇವೇಗೌಡರು ತಮ್ಮ ಜೀವನದ ಬಹುಕಾಲವನ್ನು ವಿರೋಧ ಪಕ್ಷದಲ್ಲೇ ಕಳೆದಿದ್ದಾರೆ. ಅವರು ಕೇವಲ ನಾಲ್ಕುವರೆ ವರ್ಷ ಮಾತ್ರ ಅಧಿಕಾರದಲ್ಲಿದ್ದರು. ಅವರು ಹೆಚ್ಚು ಕಾಲ ವಿರೋಧ ಪಕ್ಷದಲ್ಲಿದ್ದರೂ ಸಹ ಜಿಲ್ಲೆಯ ಜನತೆ ಅವರೊಂದಿಗೆ ಇದ್ದಾರೆ ಎಂದುರು. 

ನಮ್ಮ ರೇವಣ್ಣನವರಿಗೆ ಆತುರ ಜಾಸ್ತಿ. ಕಳೆದ ಹತ್ತು ವರ್ಷಗಳಲ್ಲಿ ಅವರ ಜಿಲ್ಲೆ ಹಿಂದುಳಿದಿದೆ ಎನ್ನುವ ಬೇಸರ ಅವರಲ್ಲಿದೆ. ಹೀಗಾಗಿ ಅವರು ಒಂದೇ ರಾತ್ರಿಯಲ್ಲಿ ಎಲ್ಲಾ ಕೆಲಸಗಳು ಆಗಬೇಕು ಎನ್ನುವ ಹುಚ್ಚು ಕಲ್ಪನೆಯಲ್ಲಿದ್ದಾರೆ. ಆದರೆ ಅವರೂ ಸಹ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಜಿಲ್ಲೆಯ ಅಭಿವೃದ್ಧಿಗೆ ರೇವಣ್ಣನವರು ಅತಿಯಾದ ಉತ್ಸುಕತೆಯನ್ನು ಹೊಂದಿದ್ದಾರೆ ಎಂದರು. 

ತಪ್ಪು ಮಾಡಿದ್ದವರು ಯಾರೇ ಆಗಲಿ ಅದು ನಮ್ಮ ಕುಟುಂದವರೇ ಇರಲಿ, ಇಲ್ಲಾ ಸಹೋದರನೇ ಇರಲಿ, ನಾನು ಯಾರಿಗೂ ರಾಜಿಯಾಗುವವನಲ್ಲ. ಕಾಂಗ್ರೆಸ್ ಮಾಜಿ ಸಚಿವ ಎ.ಮಂಜುರವರು ರೇವಣ್ಣನವರ ವಿರುದ್ಧ ಭೂ-ಕಬಳಿಕೆ ಆರೋಪದ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದೇನೆ. ಶೀಘ್ರವೇ ಇದಕ್ಕೆ ಅಧಿಕಾರಿಗಳೇ ಉತ್ತರ ನೀಡುತ್ತಾರೆ ಎಂದರು. 

ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ತಾನು ಪಣತೊಟ್ಟಿದ್ದು, ಉದ್ಯೋಗ ಸೃಷ್ಠಿ, ಕೈಗಾರಿಕಾ ಅಭಿವೃದ್ಧಿಗೆ ಇತ್ತು ನೀಡುತ್ತಿದೆ ಎಂದರು.  ರಾಜ್ಯದಲ್ಲಿ ಜಾತಿ ಮನೋಭಾವ ದೂರಾಗಬೇಕು. ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ರಾಜ್ಯ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕಿನಲ್ಲಿ ಸುಸ್ತಿ ಸಾಲ ಮತ್ತು ಸಹಕಾರ ಬ್ಯಾಂಕ್‍ನಲ್ಲಿ 1 ಲಕ್ಷ ರೂಪಾಯಿ ವರಗಿನ ಚಾಲ್ತಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದ ಅನುಷ್ಠಾನ ಕ್ರಮ ಚುರುಕಾಗಿದೆ. 22 ವರ್ಷದ ಋಣಭಾರ ಇಳಿಸಿಯೇ ತೀರುವುದಾಗಿ ಹೇಳಿದರು.

ಈಗಾಗಲೇ ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಸಾಲ ಮನ್ನಾ ಬಾಕಿ ತೀರಿಸಲಾಗಿದೆ. ಈಗ ಚಾಲ್ತಿ ಸಾಲ ಮತ್ತು ಸೆಪ್ಟೆಂಬರ್ ಅಂತ್ಯದ ವರೆಗಿನ ಮಾಸಿಕ ಕಂತನ್ನು ಪೂರ್ತಿ ಬಿಡುಗಡೆ ಮಾಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ, ಸಹಕಾರ ಸಚಿವ ಬಂಡೆ ಪುಕಾಶಂಪುರ್, ಶಾಸಕರಾದ ಮರಿತಿಬ್ಬೇಗೌಡ, ಎ.ಟಿ. ರಾಮಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಕೆ.ಎಸ್. ಲಿಂಗೇಶ್, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎಂ.ಎ. ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂ. ಅಧ್ಯಕ್ಷ ಶ್ವೇತಾದೇವರಾಜ್, ಜಿಲ್ಲಾ ಪಂ. ಉಪಧ್ಯಕ್ಷ ಸುಪ್ರದೀಪ್ ಯಜಮಾನ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಎಸ್.ಎನ್. ಪ್ರಕಾಶ್‍ಗೌಡ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News