ಚಿಕ್ಕಮಗಳೂರು: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು
Update: 2018-09-20 18:08 GMT
ಚಿಕ್ಕಮಗಳೂರು, ಸೆ.20: ಮಹಿಂದ್ರಾ ಮಾಕ್ಸಿಮೋ ಹಾಗೂ ಮಾರುತಿ 800 ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯವಾದ ಘಟನೆ ಗುರುವಾರ ನಡೆದಿದೆ.
ಮಹಿಂದ್ರಾ ಮಾಕ್ಸಿಮೋದಲ್ಲಿದ್ದ ಲಕ್ಕಪ್ಪ (60) ಸಾವನಪ್ಪಿದ್ದಾರೆ. ಮೃತ ಲಕ್ಕಪ್ಪ ಚಿಕ್ಕಮಗಳೂರು ತಾಲೂಕಿನ ಹರಿಹರದಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನ ಗಿರಿ ರಸ್ತೆಯಲ್ಲಿರುವ ಕಲ್ಲುದೇವರ ಎಸ್ಟೇಟ್ ಸಮೀಪ ಕಾರುಗಳ ನಡುವೆ ಅಫಘಾತ ಸಂಭವಿಸಿದ್ದು, ಮಾರುತಿ ಕಾರು 300 ಅಡಿ ಪ್ರಪಾತಕ್ಕೆ ಉರುಳಿದೆ. ಕಾರಿನಲ್ಲಿದ್ದ ನಾಲ್ವರು ಕಾರಿನಿಂದ ಜಿಗಿದು ಪಾರಾಗಿದ್ದಾರೆಂದು ತಿಳಿದು ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.