ಹನೂರು: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ; ಮೂವರಿಗೆ ಗಾಯ
ಹನೂರು,ಸೆ.21: ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಾಸ್ಸಾಗುತ್ತಿದ್ದ ವೇಳೆ ಬೈಕ್ಗಳ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಹನೂರು ಸಮೀಪದ ಹುಲುಸುಗುಡ್ಡೆಯ ಬಳಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಪ್ರಕಾಶಪ್ಪ ಅವರ ಮಗ ಸುರೇಶ್ (52) ಪವನ್ (10) ಶಿವಕುಮಾರ್ (58) ಎಂಬವರೇ ಗಾಯಗೊಂಡವರು. ಈ ಮೂವರು ಶುಕ್ರವಾರ ಬೆಳಗ್ಗೆ ಗ್ರಾಮದಿಂದ ಬೈಕ್ನಲ್ಲಿ ಮಲೆಮಹದೇಶ್ವರ ತೆರಳಿ ಪೂಜೆ ಸಲ್ಲಿಸಿ ಸಂಜೆ ವೇಳೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಹನೂರು ಸಮೀಪದ ಹುಲುಸುಗುಡ್ಡೆಯ ಬಳಿ ಎದುರು ಬಂದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಸುರೇಶ್ ತಲೆಗೆ ತೀವ್ರ ಪೆಟ್ಟಾಗಿದ್ದು, ಪವನ್ ಹಾಗೂ ಶಿವಕುಮಾರ್ ಗಾಯಗೊಂಡರು.
ಸಾರ್ವಜನಿಕರು ಗಾಯಾಳುಗಳನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದರು. ತೀವ್ರ ಗಾಯಗೊಂಡ ಸುರೇಶ್ ರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ಹನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.