ನೂತನ ಡಿಸಿಪಿ ಕವಿತಾ ವರ್ಗಾವಣೆ ರದ್ದು ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದೆ: ಸಾ.ರಾ.ಮಹೇಶ್ ಸ್ಪಷ್ಟನೆ

Update: 2018-09-22 16:45 GMT

ಮೈಸೂರು,ಸೆ.22: ಮೈಸೂರು ಅಪರಾಧ ಹಾಗೂ ಸಂಚಾರ ವಿಭಾಗದ ನೂತನ ಡಿಸಿಪಿ ಬಿ.ಟಿ.ಕವಿತಾ ವರ್ಗಾವಣೆ ರದ್ದು ಮಾಡುವಂತೆ ನಾನೇ ಸರ್ಕಾರಕ್ಕೆ ಮನವಿ ಮಾಡಿದ್ದು, ಹೀಗಾಗಿ ರದ್ದಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಇದು ಸರ್ಕಾರದ ಪ್ರಕ್ರಿಯೆ. ಇದರಲ್ಲಿ ರಾಜಕೀಯ ಇಲ್ಲ. ದಸರಾ ವೇಳೆ ವರ್ಗಾವಣೆ ಬೇಡವೆಂದು ನಾನು ಈ ರೀತಿ ಕ್ರಮ ಕೈಗೊಂಡಿದ್ದೇನೆ. ದಸರಾದಲ್ಲಿ ಪ್ರಮುಖವಾಗಿ ಟ್ರಾಫಿಕ್ ಜಾಂ ಆಗಬಾರದು. ಇದಕ್ಕಾಗಿ ಯಾವ ಅಧಿಕಾರಿ ಇಲ್ಲಿ ಕರ್ತವ್ಯ ನಿರ್ವಹಿಸಿದರೆ, ಸರಿ ಬರುತ್ತೆ ಅನ್ನೋದು ನಮಗೆ ಗೊತ್ತು. ಈ ಹಿಂದೆ ವಿಕ್ರಮ್ ಆಮ್ಟೆ ಇದ್ದರು. ಅವರೇ ಬೇಕಾದರೆ ಮುಂದುವರಿಯಲಿ. ನನಗೆ ಟ್ರಾಫಿಕ್ ಕ್ಲೀಯರನ್ಸ್ ಮುಖ್ಯ. ಅನುಭವ ಇರುವ ಅಧಿಕಾರಿ ಬೇಕೇ ಹೊರತು ಅನುಭವ ಇಲ್ಲದ ಅಧಿಕಾರಿ ಅಲ್ಲ. ಈ ವಿಚಾರವಾಗಿ ಹಲವು ಸಂಘಟನೆಗಳು ನನ್ನ ವಿರುದ್ಧ ಧಿಕ್ಕಾರ ಕೂಗಿದರೆ ಏನು ಪ್ರಯೋಜನ ಎಂದರು.

ಹತ್ತು ಮಂದಿ ಬಿಜೆಪಿ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ತಾಕತ್ತಿದ್ದರೆ ಅವರ ಹೆಸರು ಬಹಿರಂಗಪಡಿಸುವುಂತೆ ಸಚಿವರಿಗೆ ಸವಾಲು ಹಾಕಿದ್ದ ಶಾಸಕ ಎಲ್.ನಾಗೇಂದ್ರ ಅವರಿಗೆ ತಿರುಗೇಟು ನೀಡಿದರು. ನಾಗೇಂದ್ರ ಮೊನ್ನೆ ತಾನೇ ಶಾಸಕರಾಗಿದ್ದಾರೆ.ಅವರಿಗೆ ಭಾಷೆ ಮೇಲೆ ಹಿಡಿತವಿಲ್ಲ. ಅವರಿಗೇನು ಗೊತ್ತು, ಬಿಜೆಪಿ ಶಾಸಕರು ನಮ್ಮ ಜೊತೆ ಇದ್ದಾರೆ ಅಂತ. ಬಹುಶಃ ಅವರೂ ಇರಬಹುದು ಅಂತ ಜನ ಅನುಮಾನ ವ್ಯಕ್ತಪಡಿಸಿರಬೇಕು. ಅದಕ್ಕೆ ಆ ರೀತಿ ಮಾತನಾಡಿದ್ದಾರೆ. ಅವರನ್ನು ಕರೆಸಿ ಮಾತನಾಡುವ ಪ್ರಯತ್ನ ಮಾಡುತ್ತೇನೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News