ದುಡುಕಿ ಪ್ರಾಣ ಕಳೆದುಕೊಳ್ಳಬೇಡಿ, ಸರಕಾರ ನಿಮ್ಮೊಂದಿಗಿದೆ: ರೈತರಿಗೆ ಕುಮಾರಸ್ವಾಮಿ ಭರವಸೆ

Update: 2018-09-23 13:32 GMT

ಹಾಸನ ಸೆ.23: ಜನಸಾಮಾನ್ಯರ ನೋವುಗಳನ್ನು ದೂರ ಮಾಡಲು ದೇವರು ತಮಗೆ ಪುನರ್ಜನ್ಮ ನೀಡಿ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದ್ದಾನೆ. ರೈತ ಕುಟುಂಬಗಳು ದುಡುಕಿ ಪ್ರಾಣ ಕಳೆದು ಕೊಳ್ಳಬೇಡಿ ತಾಳ್ಮೆ ವಹಿಸಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ   

ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು 1,650 ಕೋಟಿ ರೂಪಾಯಿ ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಬಡವರು, ರೈತರು ಸಂಕಷ್ಟಗಳನ್ನು ತೀರಿಸಲು ಸರಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದ್ದು ಸ್ವಲ್ಪ ಸಮಾಧಾನದಿಂದ ಕಾಯುವಂತೆ ತಿಳಿಸಿದರು .

ರಾಜ್ಯದಲ್ಲಿ 44 ಲಕ್ಷ  ರೈತ ಕುಟುಂಬಗಳು ಮಾಡಿದ್ದ 40 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲಾಗಿದೆ . ಖಾಸಗಿ ಲೇವಾದೇವಿದಾರ ಅಕ್ರಮ ಬಡ್ಡಿ ವಸೂಲಾತಿಗೂ ಶೀಘ್ರದಲ್ಲೇ ಕಡಿವಾಣ ಬೀಳಲಿದ್ದು ಯಾರು ಅಂಜುವ ಅಗತ್ಯ ಇಲ್ಲ ಎಂದು  ಮುಖ್ಯಮಂತ್ರಿ ಭರವಸೆ ನೀಡಿದರು.

ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗೆ ತಮ್ಮ ಕಾರ್ಯಕ್ರಮಗಳೇ ಉತ್ತರ ನೀಡುತ್ತಿವೆ. ರಾಜ್ಯದ ಸಮಗ್ರ ಅಭಿವೃದ್ಧಿ ಸರ್ಕಾರದ ಗುರಿ. ಜನರ ಸಮಸ್ಯೆಗಳನ್ನು  ಬಗೆಹರಿಸಲು  ತಮ್ಮ ಕೈಯಲ್ಲಿ ಸಾಧ್ಯವಾಗದೇ ಇದ್ದಲ್ಲಿ ಆ ಕ್ಷಣವೇ ಅಧಿಕಾರದಿಂದ ನಿರ್ಗಮಿಸಲು ಸಿದ್ಧ. ಯಾರಿಂದಲೂ ದಬ್ಬಿಸಿಕೊಂಡು ಹೋಗುವ ಜಾಯಮಾನ ತನ್ನದಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಹುಸಿ ಆರೋಪಗಳಿಂದ ತಮ್ಮ ನೈಜ, ಜನಪರ ಕಾಳಜಿಯನ್ನು ಮರೆಮಾಚಲು ಸಾಧ್ಯವಿಲ್ಲ ಎಂದ ಅವರು, ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದುವರಿಸಿ ಹತ್ತಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಡೀಸೆಲ್, ಪೆಟ್ರೋಲ್ ದರ ಕಡಿಮೆ ಇದೆ. ಎಲ್ಲಾ ಆರ್ಥಿಕ ಇತಿಮಿತಿಗಳ ನಡುವೆ ರೈತರ ಸಾಲ ಮನ್ನಾ ಮಾಡಿದ್ದು, ಮುಂಬರುವ ಜುಲೈ ತಿಂಗಳೊಳಗಾಗಿ ರಾಷ್ಟ್ರೀಯ ಬ್ಯಾಂಕ್‍ಗಳ ಸುಸ್ತಿ ಸಾಲ ತೀರುವಳಿಯಾಗಲಿದೆ ಎಂದರು.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯಮಗಳ ಸ್ಥಾಪನೆಗೆ ಸರ್ಕಾರ ಗಮನ ಹರಿಸುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. 

ಕಳೆದ ಹತ್ತು ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. 2006ಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಗೊಂಡರೂ ಇಲ್ಲಿ ಕಲಿಯುವ ಬಡ ಮಕ್ಕಳು ಪ್ರಯೋಗಾಲಯಕ್ಕೆ ಖಾಸಗಿ ಕಾಲೇಜಿಗೆ ಅಲೆಯುವ ಪರಿಸ್ಥಿತಿ ಇದೆ. ಹಿಂದೆ ಮಾಡಿದ ಯೋಜನೆಗಳು ಹಾಗೇ ಇವೆ. ಅವುಗಳನ್ನು ಪೂರ್ಣಗೊಳಿಸಿ ಜನ್ಮ ನೀಡಿದ ನೆಲದ ಜನರ ಋಣ ತೀರಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ನೈತಿಕ ಮಾರ್ಗ ಬಿಟ್ಟು ಕೆಲಸ ಮಾಡಿದರೆ ದಂಗೆ ಏಳಿ ಎಂದು ಈ ಹಿಂದೆ ಜಿಲ್ಲೆಗೆ ಬಂದಾಗ  ಹೇಳಿದ್ದೆ. ತಾವು ತಪ್ಪು ಮಾಡಿದರೂ ತಮ್ಮ ವಿರುದ್ದವೂ ದಂಗೆ ಏಳಿ ಎಂಬ ಅರ್ಥದಲ್ಲಿ ಈ ಹಿಂದೆ ಆಡಿದ ಮಾತಿಗೆ ಅಪಾರ್ಥ ಕಲ್ಪಿಸಿ ಬಿಜೆಪಿ ಪ್ರತಿಭಟನೆ ಮಾಡಿದ್ದು, ಸರ್ಕಾರ ಅಸ್ಥಿರಗೊಳಿಸುವುದೊಂದೆ ಆ ಪಕ್ಷದ  ಕಾರ್ಯಕ್ರಮ. ಆದರೆ ತಾವು ಇದಾವುದಕ್ಕೂ ಅಂಜುವುದಿಲ್ಲ. ಸರ್ಕಾರ ಬೀಳುವ ಯಾವುದೇ ಆತಂಕವೂ ಇಲ್ಲ. ಭಾರತೀಯ ಜನತಾ ಪಕ್ಷ ಪ್ರಜ್ಞಾವಂತಿಕೆಯಿಂದ ವರ್ತಿಸಬೇಕು ಎಂದರು.

ಸ್ಥಳೀಯ ಶಾಸಕ ಗೈರು: ಸಿಎಂ ಅಸಮಾಧಾನ:

ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ಹಾಸನ ಕ್ಷೇತ್ರದ ಶಾಸಕರು ಪತ್ತೆ ಇಲ್ಲ. ಇದು ಸರಿಯಾದ ನಡವಳಿಕೆಯಲ್ಲ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.

ಬಜೆಟ್‍ನಲ್ಲಿ ಹಾಸನದ ರಿಂಗ್ ರಸ್ತೆ ಅಭಿವೃದ್ಧಿಗೆ 30 ಕೋಟಿ ರೂಪಾಯಿ ನೀಡಿದಾಗ ವಿರೋಧ ಪಕ್ಷಗಳು ಟೀಕಿಸಿದಾಗ ಒಂದೂ ಮಾತನಾಡದೆ, ಕ್ಷೇತ್ರಕ್ಕೆ ಹಣ ನೀಡಿದಾಗ ಕನಿಷ್ಟ ಕೃತಜ್ಞತೆ ಸಲಿಸದ ಮನಸ್ಥಿತಿಯ ಶಾಸಕರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು .

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ವಿರೋಧ ಪಕ್ಷಗಳು ನೈತಿಕ ರಾಜಕಾರಣದ ಪ್ರದರ್ಶನ ಮಾಡಬೇಕು. ಮಾಜಿ ಪ್ರಧಾನಿ ವಾಜಪೇಯಿ ಅವರು ತೋರಿದ ಧೀಮಂತ ನಡವಳಿಕೆ ಗಮನಿಸಬೇಕು. ಜನತಂತ್ರ ವ್ಯವಸ್ಥೆಯಡಿ ರಚನೆಯಾದ ಸರ್ಕಾರವನ್ನು ಅಸ್ಥಿರಗೊಳಿಸುವುದೊಂದೇ ರಾಜಕೀಯ ಪಕ್ಷದ ಗುರಿಯಾಗಬಾರದು ಎಂದು ಬಿಜೆಪಿಗೆ ಕಿವಿಮಾತು ಹೇಳಿದರು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಶಾಸಕರನ್ನು ನಿಭಾಯಿಸುವ ಶಕ್ತಿ ಇದೆ. ಕೆಲವರಲ್ಲಿ ಸಚಿವರಾಗುವ ಬಯಕೆ ಇರಬಹುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ಸಮನ್ವಯ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಪ್ರಯತ್ನಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನು ಅವರು ನೇರವಾಗಿ ತಿಳಿಸಿದ್ದಾರೆ. ಜೆಡಿಎಸ್ ಶಾಸಕರಲ್ಲಿ ಯಾವುದೇ ಅತೃಪ್ತಿ ಇಲ್ಲ ಇನ್ನು ಸರ್ಕಾರ  ಬೀಳುವ ಭೀತಿ ಎಲ್ಲಿಂದ  ಬಂತು ಎಂದರು.

ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ  ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿಕೊಟ್ಟ ಸಚಿವರುಗಳಿಗೆ ಕೃತಜ್ಞತೆ ಅರ್ಪಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ಸಹಕಾರ ಸಚಿವ ಬಂಡೆಪ್ಪ ಕಾಶಂಪುರ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಶಿಕ್ಷಣ ಸಚಿವ ಮಹೇಶ್, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಣ್ಣ ನೀರಾವರಿ ಸಚಿವ ಪುಟ್ಟರಾಜು, ಸಣ್ಣ ಕೈಗಾರಿಕೆ ಸಚಿವ ಎಂ.ಆರ್.ಶ್ರೀನಿವಾಸ್, ಪಶು ಸಂಗೋಪನೆ ಖಾತೆ ಸಚಿವ ವೆಂಕಟರಾವ್ ನಾಡಗೌಡ, ತೋಟಗಾರಿಕೆ ಸಚಿವ ಎಂ.ಸಿ.ಮನಗೋಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ದೇವರಾಜ್, ಶಾಸಕರಾದ ಎಚ್.ಕೆ ಕುಮಾರಸ್ವಾಮಿ, ಸಿ.ಎನ್.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಹಾಗೂ ವಿವಿಧ ಜಿಲ್ಲೆಗಳ ಶಾಸಕರು, ರಾಜ್ಯಮಟ್ಟದ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News