ನನ್ನನ್ನು 'ಆಪರೇಷನ್ ಕಮಲ' ಮಾಡುವ ತಾಕತ್ತು ಬಿಜೆಪಿಗಿಲ್ಲ: ಶಾಸಕ ಕೆ.ಸಿ.ನಾರಾಯಣಗೌಡ ಸ್ಪಷ್ಟನೆ
Update: 2018-09-23 16:00 GMT
ಕೆ.ಆರ್.ಪೇಟೆ, ಸೆ.23: ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಆಪರೇಷನ್ ಕಮಲ ಮಾಡುವ ತಾಕತ್ತು ಬಿಜೆಪಿ ಪಕ್ಷಕ್ಕಿಲ್ಲ. ಯಡಿಯೂರಪ್ಪ ಹಗಲುಗನಸು ಕಾಣುತ್ತಿದ್ದಾರೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ಹಾಸನ ಜೆಡಿಎಸ್ ಶಾಸಕಾಂಗ ಸಭೆಗೆ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಅನುಮತಿ ಪಡೆದುಕೊಂಡು ಗೈರು ಹಾಜರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಾನು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ. ಕನಸಿನಲ್ಲಿಯೂ ಬಿಜೆಪಿ ಪಕ್ಷ ಸೇರುವ ಬಗ್ಗೆ ಆಲೋಚನೆ ಮಾಡಿಲ್ಲ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನನ್ನನ್ನು ಭೇಟಿ ಮಾಡಿಲ್ಲ. ಜೆಡಿಎಸ್-ಕಾಂಗ್ರೆಸ್ ಸರಕಾರವು ಸುಭದ್ರವಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಐದು ವರ್ಷಗಳ ಆಡಳಿತ ಸಂಪೂರ್ಣ ನಡೆಸುತ್ತಾರೆ ಎಂದು ಅವರು ಹೇಳಿದರು.