ಒಳಪಂಗಡ ಮರೆತು ವೀರಶೈವ-ಲಿಂಗಾಯತರು ಒಗ್ಗೂಡಿದರೆ ಮಾತ್ರ ಉಳಿವು: ಶಾಸಕ ಶಾಮನೂರು ಶಿವಶಂಕರಪ್ಪ

Update: 2018-09-23 16:22 GMT

ದಾವಣಗೆರೆ,ಸೆ.23: ಒಳಪಂಗಡ ಮರೆತು ವೀರಶೈವ ಮತ್ತು ಲಿಂಗಾಯತರು ಒಗ್ಗೂಡಿದರೆ ಮಾತ್ರ ಉಳಿವು, ಇಲ್ಲದಿದ್ದರೆ ಅಳಿವು ಖಚಿತ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಮುದಾಯವನ್ನು ಎಚ್ಚರಿಸಿದ್ದಾರೆ.

ಇಲ್ಲಿನ ಶ್ರೀ ಶೈಲ ಮಠದಲ್ಲಿ ಏರ್ಪಡಿಸಿದ್ದ ಲಿಂ. ವಾಗೀಶಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ 32 ನೇ ಪುಣ್ಯಾರಾಧನೆ. ಲಿಂ.ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಏಳನೇ ಸ್ಮರಣೋತ್ಸವ ಹಾಗೂ ಜನಜಾಗೃತಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು .
ವೀರಶೈವ -ಲಿಂಗಾಯತ ಸಮಾಜ ಒಗ್ಗಟ್ಟು ಪ್ರದರ್ಶಿಸುವಲ್ಲಿ ಎಲ್ಲ ಜಗದ್ಗುರುಗಳು ಶ್ರಮಿಸುತ್ತಿದ್ದಾರೆ. ಅದರಂತೆ ಸಮಾಜದ ಪ್ರತಿಯೊಬ್ಬರು ಒಳಪಂಗಡ ಮರೆತು ಸಮಾಜದ ಅಭಿವೃದ್ದಿಗೆ ಕೈಜೋಡಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಕರೆಕೊಟ್ಟರು.  

ಲಿಂ. ವಾಗೀಶಪಂಡಿತಾರಾಧ್ಯ ಶ್ರೀಗಳು, ಲಿಂ.ಉಮಾಪತಿ ಪಂಡಿತಾರಾಧ್ಯ ಶ್ರೀಗಳು ಸಮಾಜದ ಏಳ್ಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೇ 12 ನೇ ಶತಮಾನದಲ್ಲಿ ಬಸವಣ್ಣನವರು ಕಾಯಕಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ್ದಾರೆ. ಕಾಯಕದ ಮೂಲಕ ಜೀವನ ಕಟ್ಟಿಕೊಳ್ಳಬೇಕು ಎಂಬ ಸಂದೇಶ ನೀಡಿದ ಅವರು, ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಜೊತೆಗೆ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸುವ ಮೂಲಕ ದೇಶಕ್ಕೆ ಸಂದೇಶ ನೀಡಿದ್ದರು ಎಂದರು.

ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು, ಆದರ್ಶ ಮತ್ತು ಅನುಕರಣಿಯವಾದ ಆಚಾರ - ವಿಚಾರ, ಸೇವೆ ಸತ್ಕಾರ್ಯಗಳ ಮೂಲಕ ಸಮಾಜೋನ್ನತಿ ಸಾಧಿಸಿದ ಪೂರ್ವಜರಾದ ಪೂರ್ವಾಚಾರ್ಯರ ಆದರ್ಶ ತತ್ವ ಸಿದ್ದಾಂತಗಳು ಸಮಸ್ತ ಮಾನವ ಕುಲಕ್ಕೆ ದಾರಿದೀಪವಾಗಿದೆ ಎಂದರು.

ಸ್ಮರಣೋತ್ಸವಗಳು ಪೂರ್ವಜರ ವೈಭವೀಕರಣಕ್ಕೆ ಸೀಮಿತವಾಗಿರದೆ ಅದರ ನೆಪದಲ್ಲಿಯೇ ಸಮಾಜದ ಸರ್ವತೋಮುಖ ವಿಕಾಸಕ್ಕೆ ಪ್ರೇರಕವಾಗಬೇಕು ಎನ್ನುವ ಉದ್ದೇಶದಿಂದಲೇ ಉಭಯ ಜಗದ್ಗುರುಗಳವರ ಕ್ರಿಯಾಸಮಾದಿಯ ಸಮ್ಮುಖದಲ್ಲಿ 3 ದಿನಗಳ ಕಾಲ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಸದಪಯೋಗವನ್ನು ಯಾವುದೇ ಭೇದವಿಲ್ಲದೆ ಸರ್ವರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಬೇಬಿಮಠದ ಅಧ್ಯಕ್ಷ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳವರು ವಹಿಸಿದ್ದರು. ಬಿದರಕೆರೆ ಷ.ಬ್ರ.ರುದ್ರಮುನಿ ಶಿವಾಚಾರ್ಯ ಸ್ವಾಮಿ, ಅವರಗೊಳ್ಳ ಪುರವರ್ಗ ಮಠದ ಷ.ಬ್ರ.ಓಂಕಾರ ಶಿವಾಚಾರ್ಯ ಸ್ವಾಮೀಜಿ, ಜಡೇಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿದವರು. 

ಮುಖ್ಯಅತಿಥಿಗಳಾಗಿ ಪಾಲಿಕೆಯ ಮೇಯರ್ ಶ್ರೀಮತಿ ಶೋಭಾ ಶಿವಾನಂದ ಪಲ್ಲಾಗಟ್ಟೆ, ಸಾಗರದ ಅಕ್ಕನ ಬಳಗದವರು ಪ್ರಾರ್ಥಿಸಿದರು. ಕಾರ್ಯದರ್ಶಿ ಎಸ್.ಜಿ.ವಾಗೀಶ್ವರಯ್ಯ ಸ್ವಾಗತಿಸಿದರು. ದಾ.ಹ.ಅರ್ಬನ್ ಬ್ಯಾಂಕ್‍ನ ಅಧ್ಯಕ್ಷ ಎನ್.ಎಂ.ಮುರುಗೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಬಳ್ಳಾರಿ ರೇವಣ್ಣ ಉಪನ್ಯಾಸ ನೀಡಿದರು. ಅಜ್ಜಂಪುರ ಶೆಟ್ರು ಮೃತ್ಯುಂಜಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News