ತಂತಿ ಮೇಲಿನ ನಡಿಗೆಯಾದ ತಂತಿಪಾಲದ ಜನರ ಬದುಕು: ಪ್ರಕೃತಿ ಮುನಿಸಿಗೆ ಗ್ರಾಮವೇ ಕಳೆದು ಹೋಯಿತು !

Update: 2018-09-24 17:28 GMT

ಮಡಿಕೇರಿ, ಸೆ.24: ಭತ್ತದ ಗದ್ದೆಗಳು, ಕಾಫಿ ತೋಟಗಳ ನಡುವೆ ಕಂಗೊಳಿಸುತ್ತಿದ್ದ ಗ್ರಾಮವೇ ತಂತಿಪಾಲ. ಹಲವು ವರ್ಷಗಳ ಹಿಂದೆ ಈ ಗ್ರಾಮಕ್ಕೆ ಸಂಪರ್ಕ ಸೇತುವೆ ಇಲ್ಲದ ಕಾರಣದಿಂದಾಗಿ ಗ್ರಾಮಸ್ಥರ ಅನುಕೂಲಕ್ಕಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು. ಸರ್ವಋತುವಲ್ಲೂ ಹರಿಯುವ ಹೊಳೆಗೆ ಕಟ್ಟಿದ ತೂಗು ಸೇತುವೆಯಿಂದ ಈ ಗ್ರಾಮಕ್ಕೆ ತಂತಿಪಾಲ ಎಂಬ ಹೆಸರು ಬಂತು ಎನ್ನಲಾಗುತ್ತಿದೆ.

ಅಧಿಕ ಮಳೆ, ಭೂ ಕುಸಿತ, ರಸ್ತೆ ಸಂಪರ್ಕ ಬಂದ್ ಆಗುವುದು ಈ ಗ್ರಾಮದ ನಿವಾಸಿಗಳಿಗೆ ಹೊಸದೇನಲ್ಲ. ಆದರೆ, ಪ್ರಕೃತಿ ಹರಸಿದ ಊರೇ ಇಂದು ಪ್ರಕೃತಿಯ ವಿಕೋಪಕ್ಕೆ ಭೂ ಸಮಾಧಿಯಾಗಿದೆ. ಕಾಫಿ ತೋಟಗಳು ಗದ್ದೆಯೊಳಗೆ ಹುದುಗಿದ್ದರೆ, ಗದ್ದೆಗಳು 10 ಅಡಿ ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಕೊಡವ ಮತ್ತು ಗೌಡ ಜನಾಂಗದವರು ಒಂದಾಗಿ ಬಾಳಿದ ಊರು ಭೌಗೋಳಿಕವಾಗಿ ಮರೆಯಾಗಿದ್ದು, ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಒಂದು ಕಡೆ ನದಿ ಪಾಲಾದ ಹೆಮ್ಮೆತ್ತಾಳು ಗ್ರಾಮ, ಮತ್ತೊಂದು ಕಡೆ ತಂತಿಪಾಲ ಬೆಟ್ಟ ತಪ್ಪಲು ಕುಸಿದು ಇಡೀ ತಂತಿಪಾಲ ಗ್ರಾಮವೇ ಟಿಂಬರ್ ಡಿಪೋದಂತೆ ಪರಿವರ್ತನೆಯಾಗಿದೆ. ಭಾರೀ ಗಾತ್ರದ ಸಾವಿರಾರು ಮರಗಳು ತಂತಿಪಾಲ ಊರಿನ ಗದ್ದೆಯಲ್ಲಿ ಹರಡಿಕೊಂಡಿದ್ದು, ಪ್ರಕೃತಿಯ ವಿಕೋಪಕ್ಕೆ ಸಾಕ್ಷಿ ಹೇಳುತ್ತಿವೆ.

ತಂತಿಪಾಲ ಹೊಳೆಯ ತುಂಬಾ ಮಣ್ಣಿನ ರಾಶಿ ತುಂಬಿಕೊಂಡಿದ್ದು, ಹೊಳೆಯ ಹರಿವಿನ ದಿಕ್ಕೇ ಬದಲಾಗಿದೆ. ಬೆಟ್ಟದ ಮೇಲಿಂದ ಇಂದಿಗೂ ಉಕ್ಕಿ ಹರಿಯುತ್ತಿರುವ ಅಂತರ್ಜಲ ಈ ಗ್ರಾಮವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಕಡಿದು ಹಾಕಿ ಕಣಿವೆಯನ್ನಾಗಿಸಿದೆ. ಕಾಫಿ, ಬಾಳೆ, ಅಡಿಕೆ ತೋಟಗಳು ಮಾತ್ರವಲ್ಲದೆ, ಮನೆ ಹಾಗೂ ವಾಹನಗಳನ್ನು ಕೂಡ ಮಹಾ ಮಳೆಯಿಂದಾದ ಭೂ ಕುಸಿತ ಬಲಿ ಪಡೆದಿದೆ. ತಂಬುಕುತ್ತಿರಾ ಕುಟುಂಬದ ಸದಸ್ಯರೋರ್ವರು ನಿರ್ಮಿಸುತ್ತಿರುವ ಹೊಸ ಮನೆ ಸಂಪೂರ್ಣ ಕೆಸರಿನಲ್ಲಿ ಮುಳುಗಿದ್ದು, ಮುಂದೆಂದೂ ಈ ಮನೆಯಲ್ಲಿ ವಾಸ ಮಾಡಲಾಗದ ಸ್ಥಿತಿ ತಲೆದೋರಿದೆ. ಈಗಾಗಲೇ ತಂತಿಪಾಲ ಹೊಳೆ ತನ್ನ ಹರಿವಿನ ದಿಕ್ಕನ್ನೇ ಬದಲಿಸಿದ್ದು, ಗದ್ದೆ ಬಯಲಲ್ಲಿರುವ ಮನೆ ಭವಿಷ್ಯದ ಮಳೆಗಾಲಗಳಲ್ಲಿ ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಮನೆ ನಿರ್ಮಾಣಕ್ಕೆ ವ್ಯಯಿಸಲಾದ ಅಂದಾಜು 15 ಲಕ್ಷ ರೂ.ವನ್ನು ನದಿಗೆ ಸುರಿದಂತಾಗಿದೆ.

ಹಲವು ತಲೆಮಾರುಗಳಿಂದ ತಂತಿಪಾಲದಲ್ಲಿ ಬದುಕಿ ಬಾಳಿದ ಕುಟುಂಬಗಳು ಇಂದು ಊರು ತೊರೆದು ನಿರಾಶ್ರಿತರ ಕೇಂದ್ರ ಮತ್ತು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿವೆ. ಹಲವು ಮನೆಗಳು ಹಾನಿಗೀಡಾಗಿವೆ. ಸಂಪರ್ಕ ರಸ್ತೆಗಳೆಲ್ಲವೂ ಧ್ವಂಸವಾಗಿರುವ ಹಿನ್ನೆಲೆಯಲ್ಲಿ ತಂತಿಪಾಲ ಗ್ರಾಮದ ನಿವಾಸಿಗಳಿಗೆ ತಮ್ಮೂರಿಗೆ ಕಾಲಿಡಲೂ ಸಾಧ್ಯವಾಗುತ್ತಿಲ್ಲ. ತಂತಿಪಾಲ ಗ್ರಾಮದ ಜನರ ಬದುಕು ಈಗ ತಂತಿ ಮೇಲಿನ ನಡಿಗೆಯಾಗಿದೆ.

‘ಇನ್ನೂ ಬೆಟ್ಟ ಕುಸಿಯುವ ಭೀತಿ ಬಿಟ್ಟಿಲ್ಲ’
ಮಕ್ಕಂದೂರಿನಲ್ಲಿ ನೆಲೆ ನಿಂತಿರುವ ಅತ್ಯಂತ ಚಿಕ್ಕ ‘ಒಕ್ಕ’ ಎಂದೇ ಕರೆಯಲಾಗುವ ಮಡ್ಲಂಡ ಕುಟುಂಬದ ಸದಸ್ಯರೋರ್ವರು ಕೂಡ ತಮ್ಮ ಸ್ವಲ್ಪಜಮೀನು ಮಾರಿ 2 ಅಂತಸ್ತಿನ ಮನೆ ನಿರ್ಮಿಸುತ್ತಿದ್ದು, ಆ ಮನೆಗೂ ಅಲ್ಪಹಾನಿಯಾಗಿದೆ. ಮಾತ್ರವಲ್ಲದೇ ಈ ಮನೆ ಕೂಡ ಭವಿಷ್ಯದಲ್ಲಿ ಜನವಾಸಕ್ಕೆ ಯೋಗ್ಯವಾಗಿ ಉಳಿದಿಲ್ಲ. ಮನೆಯ ಹಿಂಭಾಗವಿರುವ ಬೃಹತ್ ಬೆಟ್ಟ ಶ್ರೇಣಿ ಈಗಾಗಲೇ ಅರ್ಧ ಭಾಗ ಕುಸಿತವಾಗಿದ್ದು, ಉಳಿದ ಭಾಗ ಕುಸಿದು ಬೀಳಲು ತಯಾರಾಗಿದೆ. ಮುಂದಿನ ಮಳೆಗಾಲದಲ್ಲಾದರೂ ಬೆಟ್ಟ ಕುಸಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಬೆಟ್ಟ ಕುಸಿದರೆ ಇಡೀ ತಂತಿಪಾಲ ಗ್ರಾಮವೇ ಮಣ್ಣಿನಡಿಯಲ್ಲಿ ಸಣ್ಣ ಕುರುಹೂ ಸಿಗದಂತೆ ಭೂ ಸಮಾಧಿಯಾಗಲಿದೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ.

Writer - ಎಸ್.ಕೆ.ಲಕ್ಷ್ಮೀಶ

contributor

Editor - ಎಸ್.ಕೆ.ಲಕ್ಷ್ಮೀಶ

contributor

Similar News