ಕೊಡಗು ನಿರಾಶ್ರಿತರಿಗೆ ಮಾಸಿಕ 10 ಸಾವಿರ ರೂ.ಪರಿಹಾರ ಧನ: ಸಚಿವ ಯು.ಟಿ.ಖಾದರ್

Update: 2018-09-25 13:53 GMT

ಬೆಂಗಳೂರು, ಸೆ.25: ಕೊಡಗು ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮನೆಗಳನ್ನು ಕಳೆದುಕೊಂಡಿರುವ ನಿರಾಶ್ರಿತ ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳನ್ನು ಮಾಸಿಕವಾಗಿ ಪರಿಹಾರ ಧನ ನೀಡಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಮಾತನಾಡಿದ ಅವರು, ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿಕೊಡಬೇಕೆಂಬ ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ. ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವವರೆಗೆ ಪ್ರತಿ ತಿಂಗಳು ತಲಾ ಒಂದು ಕುಟುಂಬಕ್ಕೆ 10 ಸಾವಿರ ರೂ.ಪರಿಹಾರ ಧನ ನೀಡಲಾಗುವುದು ಎಂದರು.

ಕೊಡಗು ಜಿಲ್ಲೆಯಲ್ಲಿ ಸುರಿದ ಮಹಾಮಳೆಯಲ್ಲಿ 700-800 ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದು, ಅವರನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳು ಸೂಚಿಸುವ ಸ್ಥಳದಲ್ಲಿ ತಲಾ 6 ಲಕ್ಷ ರೂ.ವೆಚ್ಚದಲ್ಲಿ ನಿರಾಶ್ರಿತರಿಗೆ ದೇಶದಲ್ಲೆ ಮಾದರಿಯಾದ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಖಾದರ್ ಹೇಳಿದರು.

ರಾಜೀವ್‌ಗಾಂಧಿ ನಿಗಮದ ಮೂಲಕ ಪಡೆದಿರುವ 72,370 ಮನೆಗಳ ಪ್ರಗತಿ ವಿವರಗಳನ್ನು ಸಕಾಲಕ್ಕೆ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡದ ಫಲಾನುಭವಿಗಳ ಮಂಜೂರಾತಿಯನ್ನು ತಡೆ ಹಿಡಿಯಲಾಗಿದೆ. 37,508 ಫಲಾನುಭವಿಗಳು ಮನೆಯ ಪ್ರಗತಿ ವಿವರವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಪೈಕಿ 19 ಸಾವಿರ ಮಂದಿಯ ವಿವರಗಳು ಸರಿಯಾಗಿದ್ದು, 18 ಸಾವಿರ ಮಂದಿ ಸಲ್ಲಿಸಿರುವ ವಿವರಗಳು ಸರಿಯಾಗದೆ ಇರುವುದರಿಂದ ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದರು.

34,822 ಫಲಾನುಭವಿಗಳು ಯಾವುದೇ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿಲ್ಲ. ಆದರೂ, ನೈಜ್ಯ ಫಲಾನುಭವಿಗಳು ಅವಕಾಶ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅಕ್ಟೋಬರ್ 15ರವರೆಗೆ ಮಾಹಿತಿ ಸಲ್ಲಿಸಲು ಮತ್ತೊಂದು ಅವಕಾಶವನ್ನು ನೀಡಲಾಗಿದೆ ಎಂದು ಖಾದರ್ ತಿಳಿಸಿದರು.

ಫಲಾನುಭವಿಗಳು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಿ, ಅವರ ಮೂಲಕ ದೃಢೀಕರಣಗೊಳಿಸಿದರೆ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಮತ್ತೊಂದು ಅವಕಾಶ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ‘ಸ್ಪಂದನ’ ಕಾಲ್ ಸೆಂಟರ್(ಟೋಲ್ ಫ್ರೀ ನಂಬರ್-2311 8888) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯಡಿ ಬೆಂಗಳೂರಿನಲ್ಲಿ ಈಗಾಗಲೆ 49,500 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅ.10ರೊಳಗಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಿ, ಶೀಘ್ರವೇ ಮನೆಗಳ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಅಲ್ಲದೆ, ಎರಡನೆ ಹಂತದಲ್ಲಿಯೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ಕೊಳಗೇರಿಗಳಲ್ಲಿ 23,153 ಮನೆಗಳನ್ನು ನಿರ್ಮಿಸಲಾಗುವುದು. ದಕ್ಷಿಣ ಭಾಗದಲ್ಲಿ 15,747 ಮನೆಗಳು ಹಾಗೂ ಉತ್ತರ ಭಾಗದಲ್ಲಿ 7406 ಮನೆಗಳನ್ನು ನಿರ್ಮಿಸಲಾಗುವುದು. ಈ ಪೈಕಿ ಬೆಂಗಳೂರು ನಗರ-6367, ಹಾಸನ-877, ಮಂಡ್ಯ-1500, ಚಾಮರಾಜನಗರ-500, ಚಿಕ್ಕಮಗಳೂರು-530, ಶಿವಮೊಗ್ಗ-250, ಚಿತ್ರದುರ್ಗ-1931, ದಾವಣಗೆರೆ-755, ಮೈಸೂರು-1693, ಬಾಗಲಕೋಟೆ-784, ಧಾರವಾಡ-500, ಗದಗ-644, ಬೆಳಗಾವಿ-749, ವಿಜಯಪುರ-2100, ಗುಲ್ಬರ್ಗ-1300 ಹಾಗೂ ಬೀದರ್ ಜಿಲ್ಲೆಯಲ್ಲಿ 250 ಮನೆಗಳನ್ನು ನಿರ್ಮಿಸಲಾಗುವುದು ಎಂದು ಖಾದರ್ ವಿವರಣೆ ನೀಡಿದರು.

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವು ಸುಭದ್ರವಾಗಿದ್ದು, ಜನಪರವಾದ ಆಡಳಿತ ನೀಡುತ್ತಿದೆ. ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ, ಗೊಂದಲಗಳೂ ಇಲ್ಲ. ಎಲ್ಲವೂ ಸುಸೂತ್ರವಾಗಿದೆ ಎಂದು ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News