ಮುದ್ರಾ ಯೋಜನೆ ನಿರುದ್ಯೋಗಿ ಯುವಕರ ಪಾಲಿಗೆ ಆಶಾ ಕಿರಣ: ಸಂಸದ ಜಿ.ಎಂ.ಸಿದ್ದೇಶ್ವರ

Update: 2018-09-25 18:01 GMT

ದಾವಣಗೆರೆ, ಸೆ.25: ಕೇಂದ್ರ ಸರಕಾರದ ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳ ಅವುಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ನೀಡಿ ಯೋಜನೆಗಳು ಸದುಪಯೋಗವಾಗುವಂತೆ ನೋಡಿಕೊಳ್ಳಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.

ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಮಾರ್ಗದರ್ಶಿ ಬ್ಯಾಂಕಿನ ಜಿಲ್ಲಾ ಮಟ್ಟದ ಪುನರಾವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುದ್ರಾ ಯೋಜನೆ ನಿರುದ್ಯೋಗಿ ಯುವಕರ ಪಾಲಿಗೆ ಆಶಾ ಕಿರಣವಾಗಿದ್ದು, ಅತೀ ಹೆಚ್ಚು ಸಾಲಗಳನ್ನು ಈ ಯೋಜನೆಯಡಿ ನೀಡಬಹುದಾಗಿದೆ. ಈಗಿರುವ ಮಾಹಿತಿಯಂತೆ ಯೋಜನೆ ಜಾರಿಯಾದಾಗಿನಿಂದ 61 ಸಾವಿರ ಪಲಾನುಭವಿಗಳಿಗೆ 652.15 ಕೋಟಿ ರೂ.ಸಾಲ ನೀಡಲಾಗಿದೆ. ಈ ಯೋಜನೆಯಲ್ಲಿ ರೂ. 50 ಸಾವಿರದಿಂದ 10 ಲಕ್ಷದವರೆಗೆ ಸಾಲ ಪಡೆಯಲು ಅವಕಾಶವಿದ್ದು, ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಮೂರು ತಿಂಗಳ ಅವಧಿಯಲ್ಲಿ 17,368 ಫಲಾನುಭವಿಗಳಿಗೆ 113 ಕೋಟಿ ರೂ. ಸಾಲ ನೀಡಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯ ವಡ್ನಾಳ್, ಕೊರಟಿಗೆರೆ, ಡಿಸಿಎಂ ಟೌನ್‌ಶಿಪ್, ಸಾಸ್ವೆಹಳ್ಳಿ, ಸೋಮ್ಲಾಪುರ ಹಾಗೂ ಚಟ್ನಳ್ಳಿ ಇಲ್ಲಿ ಬ್ಯಾಂಕುಗಳು ಶಾಖೆಗಳನ್ನು ತೆರೆಯುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಲು ನೆರವಾಗಬೇಕೆಂದರು.

ಪಶು ಸಂಗೋಪನಾ ಇಲಾಖೆಯಲ್ಲಿ 2017-18 ನೇ ಸಾಲಿನಲ್ಲಿ ಹದಡಿಯ ಕಾರ್ಪೊರೇಷನ್ ಬ್ಯಾಂಕಿನ ಶಾಖೆಯಿಂದ ಪಶುಭಾಗ್ಯ ಯೋಜನೆಯಡಿ 39 ಫಲಾನುಭವಿಗಳಿಗೆ ಸಬ್ಸಿಡಿ ಹಣ ಬಿಡುಗಡೆಯಾಗಿದ್ದರೂ ಇದುವರೆಗೆ ಅವರಿಗೆ ಸಾಲ ನೀಡಲಾಗಿಲ್ಲ. ಹಾಗಿದ್ದ ಮೇಲೆ ಸಬ್ಸಿಡಿ ಹಣ ಏಕೆ ಪಡೆದಿದ್ದೀರಿ, ತಾವು ಸಾಲವನ್ನು ಮಂಜೂರು ಮಾಡಿದ ನಂತರವೇ ಸಬ್ಸಿಡಿ ಹಣವನ್ನು ಇಲಾಖೆ ಬ್ಯಾಂಕಿಗೆ ನೀಡುತ್ತದೆ. ಈ ಕೂಡಲೇ ಒಂದು ವಾರದೊಳಗಾಗಿ 39 ಜನರಿಗೆ ಸಬ್ಸಿಡಿ ಹಣ ಜಮೆಯಾಗಬೇಕೆಂದು ಹೇಳಿದರು.

ಫಲಾನುಭವಿಗಳು ಸಾಲದ ಹಣ ಬಿಡುಗಡೆ ಮಾಡುವಂತೆ ಕೇಳಿದರೆ, ಬ್ಯಾಂಕಿನ ಮ್ಯಾನೇಜರ್ ಉಡಾಪೆಯ ಮಾತುಗಳನ್ನು ಆಡುತ್ತಾರೆ ಎಂಬ ದೂರಿದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ತಮ್ಮ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಯಾವ ಬ್ಯಾಂಕುಗಳು ಸಾಲ ನೀಡುವುದರಲ್ಲಿ ನಿರೀಕ್ಷಿತ ಗುರಿಯನ್ನು ಸಾಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾವು ನೀಡುತ್ತಿರುವ ಶೈಕ್ಷಣಿಕ ಸಾಲವನ್ನು ವಸೂಲಿ ಮಾಡಲು ನೋಟಿಸ್ ನೀಡುತ್ತಿರುವುದಾಗಿ ದೂರುಗಳಿವೆ. ಹನಗವಾಡಿಯ ಯೋಗಿಶ್ ಎಂಬವರು 2013 ನೇ ಸಾಲಿನಲ್ಲಿ ಹರಿಹರದ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 3.15 ಲಕ್ಷ ಸಾಲ ಪಡೆದಿದ್ದಾರೆ. ಆದರೆ, ಅವರಿಗೆ 2018ರ ಆಗಸ್ಟ್ ಅಂತ್ಯಕ್ಕೆ ರೂ. 5,06,145 ಕಟ್ಟಬೇಕೆಂದು ಬ್ಯಾಂಕಿನಿಂದ ನೋಟಿಸ್ ಬಂದಿದೆ. ಕೇಂದ್ರ ಹಾಗೂ ರಾಜ್ಯದ ತಲಾ ಶೇ.9 ಸಬ್ಸಿಡಿಯ ಸೌಲಭ್ಯ ನೀಡದೇ ಸಂಪೂರ್ಣ ಸಾಲದ ಮೊತ್ತ ಫಲಾನುಭವಿಯೇ ಭರಿಸಬೇಕೆಂದು ನೋಟಿಸ್ ನೀಡಲಾಗಿದೆ. ಒಂದು ವೇಳೆ ಯಾವುದೇ ನಿರುದ್ಯೊಗಿ ಕೈಯಲ್ಲಿ ಉದ್ಯೋಗವಿದ್ದರೆ ಸಾಲ ಕಟ್ಟುವುದಿಲ್ಲವೆಂದು ಹೇಳುವುದಿಲ್ಲ. ಹಾಗಾಗಿ ನಿರುದ್ಯೋಗಿಗಳಿಗೆ ನೋಟಿಸ್ ಕೊಡುವುದು ಒಳ್ಳೆಯದಲ್ಲ ಎಂದರು.

ಸಾರ್ವಜನಿಕರಿಗೆ ಹೆಚ್ಚು ಉಪಯೋಗವಾಗುವಂತಹ ಜನಧನ್ ಯೋಜನೆ, ಪ್ರಧಾನ್ ಮಂತ್ರಿ ಜೀವನ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಎರ್ರಿಸ್ವಾಮಿ, ಜನಧನ್ ಯೋಜನೆಯಲ್ಲಿ 3 ಲಕ್ಷದ 3 ಸಾವಿರದ 10 ಜನ ಪಾಲಿಸಿ ಹೊಂದಿದ್ದಾರೆ. ಪ್ರಧಾನಮಂತ್ರಿ ಜೀವನಜ್ಯೋತಿ ಯೋಜನೆಯಡಿ 95 ಸಾವಿರ ಜನರು ಫಲಾನುಭವಿಗಳಾಗಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಯ ಏಳು ಕಡೆ ಸ್ಥಳ ಗುರುತಿಸಲಾಗಿದ್ದು,ಆರು ತಾಲೂಕು ಹಾಗೂ ಮಲೆಬೆನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಸ್ಥಳ ಗುರುತಿಸಿದ್ದು, ಏಳೂ ಪ್ರದೇಶಗಳ ವ್ಯಾಪ್ತಿಯ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆದು ಅವರಿಗೆ ಮನೆಸಾಲ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕೃಷಿ ಜಂಟಿ ನಿರ್ದೇಶಕ ಶರಣಪ್ಪಮುದಗಲ್ ಮಾಹಿತಿ ನೀಡಿ 2016-17 ರ ಮುಂಗಾರು ಹಂಗಾಮಿನಲ್ಲಿ 24,885 ರೈತರು ಬೆಳೆ ವಿಮೆ ಮಾಡಿಸಿದ್ದು, 44 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 2017-18ನೇ ಸಾಲಿನಲ್ಲಿ 78,375 ರೈತರು ಬೆಳೆ ವಿಮೆ ಮಾಡಿಸಿದ್ದು, 12 ಕೋಟಿ 16 ಲಕ್ಷ ಪ್ರೀಮಿಯಂ ಪಾವತಿಸಿರುತ್ತಾರೆ ಎಂದರು.

ಸಬೆಯಲ್ಲಿ ಆರ್‌ಬಿಐ ಪ್ರತಿನಿಧಿ ಆನಂದ್ ನಿವ್, ನಬಾರ್ಡ್ ಸಹಾಯಕ ಪ್ರಬಂಧಕ ರವೀಂದ್ರ, ಕೆನರಾ ಬ್ಯಾಂಕ್ ವಿಬಾಗೀಯ ಮ್ಯಾನೇಜರ್ ರಮೇಶ್, ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರರು, ವಿವಿಧ ಬ್ಯಾಂಕುಗಳ ಮುಖ್ಯಸ್ಥರು ಹಾಜರಿದ್ದರು.

ತೋಟಗಾರಿಕೆ ಬೆಳೆಗಳಲ್ಲಿ 2016-17ನೇ ಸಾಲಿನಲ್ಲಿ 6,400 ರೈತರು ವಿಮೆ ಪಾವತಿಸಿದ್ದು, ಅದರಲ್ಲಿ 6,350 ರೈತರಿಗೆ ವಿಮೆ ಪಾವತಿಯಾಗಿದೆ. ರೈತರು ತುಂಬಿದ ಪ್ರೀಮಿಯಂ 6 ಕೋಟಿ ರೂ. ರೈತರಿಗೆ ಪಾವತಿಯಾಗಿರುವುದು 16 ಕೋಟಿ ರೂ. ಆಗಿದೆ. 2017-18 ನೇ ಸಾಲಿನಲ್ಲಿ 4,824 ರೈತರು 4.30 ಕೋಟಿ ಪ್ರೀಮಿಯಂ ತುಂಬಿದ್ದಾರೆ. ಕ್ಲೇಮುಗಳ ವಿತರಣೆ ಪ್ರಗತಿಯಲ್ಲಿದೆ.
-ವೇದಮೂರ್ತಿ, ತೋಟಗಾರಿಕೆ ಉಪನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News