×
Ad

ಇ-ಫಾರ್ಮಸಿ ವಿರೋಧಿಸಿ ಔಷಧಿ ಅಂಗಡಿಗಳ ಬಂದ್ ಕರೆ: ದಾವಣಗೆರೆ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ

Update: 2018-09-28 23:04 IST

ದಾವಣಗೆರೆ,ಸೆ.28: ಆನ್‍ಲೈನ್ ಮೂಲಕ ಔಷಧ ವ್ಯಾಪಾರ ಕೈಬಿಡುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಔಷಧಿ ಅಂಗಡಿಗಳು, ಔಷಧಿ ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರು ನಗರ, ಜಿಲ್ಲಾದ್ಯಂತ ಔಷಧಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟಿಸಿದರು.

ನಗರದ ಡಿಸಿ ಕಚೇರಿಗೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ನಿಯೋಗವು ತೆರಳಿ, ಇ-ಫಾರ್ಮಸಿ ಮುಂಬರುವ ದಿನಗಳಲ್ಲಿ ಅಪಾಯ, ಸಂಕಷ್ಟ, ದುಷ್ಪರಿಣಾಮಗಳನ್ನು ತಂದೊಡ್ಡುವ ಹಿನ್ನೆಲೆಯಲ್ಲಿ ಇಂತಹ ಮಾರಕ ಮಹಾಮಾರಿಯನ್ನು ಅಪಾಯಗಳು ಆರಂಭವಾಗುವ ಮುನ್ನವೇ ಕೇಂದ್ರ ಸರ್ಕಾರ ಹಿಂಪಡೆಯಲೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಮುಖಾಂತರ ಕೇಂದ್ರಕ್ಕೆ ಮನವಿ ಅರ್ಪಿಸಿದರು. 

ಇದೇ ವೇಳೆ ಮಾತನಾಡಿದ ಸಂಘದ ಜಿಲ್ಲಾ ಗೌರವ ಕಾರ್ಯದರ್ಶಿ ಎನ್.ಪಿ.ಪ್ರಸನ್ನಕುಮಾರ, ಇ-ಫಾರ್ಮಸಿ ಎಂಬ ವಿತರಣಾ ವ್ಯವಸ್ಥೆಯನ್ನು ದೇಶಾದ್ಯಂತ ತರಾತುರಿಯಲ್ಲಿ ಜಾರಿಗೊಳಿಸಲು ಕೇಂದ್ರ ಮುಂದಾಗಿದ್ದು, ಕಾನೂನಾತ್ಮಕವಲ್ಲದ ರೀತಿಯಲ್ಲಿ ಇ-ಫಾರ್ಮಸಿ ಯೋಜನೆ ಜಾರಿಗೊಳಿಸುವ ಮೂಲಕ ಸರ್ಕಾಕರವು ಗ್ರಾಹಕರ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಔಷಧಿ ಗ್ರಾಹಕರ ಹಿತದೃಷ್ಟಿಯಿಂದ ಇ-ಫಾರ್ಮಸಿ ಎಂಬ ಕೇಂದ್ರ ಸರ್ಕಾರದ ಹೊಸ ನೀತಿ ವಿರುದ್ಧ ಗ್ರಾಹಕರಿಗೆ ವಾಸ್ತವಾಂಶ ತಿಳಿಸಬೇಕಾದ ಮಹತ್ವದ ಹೊಣೆಗಾರಿಕೆ ಔಷಧಿ ವಾಪಾರಸ್ಥರಾಗಿ ನಮ್ಮ ಮೇಲಿದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯ ಮೇರೆಗೆ ನಗರ, ಜಿಲ್ಲಾದ್ಯಂತ ಔಷಧಿ ಅಂಗಡಿ ಗಳನ್ನು ಬಂದ್ ಮಾಡುವ ಮೂಲಕ ಕೇಂದ್ರದ ಗಮನ ಸೆಳೆಯುತ್ತಿದ್ದೇವೆ ಎಂದು ಅವರು ತಿಳಿಸಿದರು. 

ಇ-ಫಾರ್ಮಸಿ ಎಂಬುದು ಔಷಧಿ ಅಂಗಡಿಯಲ್ಲ. ಇ-ಫಾರ್ಮಸಿಗೆ ಕಂಪ್ಯೂಟರ್ ಇರುವ, ಓದಲು-ಬರೆಯಲು ಬಾರದ, ಅಂಗಡಿ, ಮುಗ್ಗಟ್ಟು ಇಲ್ಲದೇ, ಔಷಧಿಯ ಅರಿವೇ ಇಲ್ಲದೇ, ಹಣದ ವಹಿವಾಟಿನ ಆಸರೆಯೂ ಇಲ್ಲದೇ, ವಿಳಾಸ ಕೊಟ್ಟು, 50 ಸಾವಿರ ಸಂದಾಯ ಮಾಡಿದರೆ ಕೊರಿಯರ್ ನಂತೆ ಔಷಧಿಗಳ ಪ್ರಾಥಮಿಕ ಜ್ಞಾನವೂ ಇಲ್ಲದಂತಹ ವ್ಯಕ್ತಿಗಳು ಕಳಿಸುತ್ತಾರೆ. ಇದರಿಂದ ಅನುಕೂಲಕ್ಕಿಂತ ಅಪಾಯ, ಅನಾಹುತಗಳೇ ಹೆಚ್ಚು ಎಂದು ಅವರು ಹೇಳಿದರು. 

ವೈದ್ಯರ ಔಷಧಿ ಚೀಟಿಯನ್ನು ಇ-ಫಾರ್ಮಸಿ ಪೋರ್ಟಲ್‍ನಲ್ಲಿ ತುಂಬಬೇಕು. ತಮಗೆ ತಲಪಬಹುದಾದ ಔಷಧವು ತಮಗೆ ವೈದ್ಯರ ಸಲಹೆಯಂತೆ ದೊರೆಯುವ ಖಾತ್ರಿ ಅಥವಾ ಗುಣಮಟ್ಟ ಔಷಧಿ ಹೌದೋ ಅಲ್ಲವೋ ಎಂಬ ಬಗ್ಗೆ ಯಾವುದೊಂದು ಪ್ರಕ್ರಿಯೆ ನಡೆಯುವುದಿಲ್ಲ. ಕಾನೂನಾತ್ಮಕವಾಗಿ -ಫಾರ್ಮಸಿಸ್ಟ್ ಕೊನೆಯಲ್ಲಿ ಔಷಧವನ್ನು ಸ್ವಹಸ್ತದಿಂದ ತಲುಪಿಸಬೇಕೇ ವಿನಾ ಇ-ಫಾರ್ಮಸಿಗೆ ಅಂತಹ ನೀತಿ ಇಲ್ಲ. ಜನರ ಆರೋಗ್ಯಕ್ಕೂ ಇ-ಫಾರ್ಮಸಿ ಕುತ್ತು ತರುವುದರಲ್ಲಿ ಯಾವುದೇ ಅನುಮಾನ ವೂ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ವಿತರಣೆಯಾದ ಔಷಧದಿಂದ ತಮಗೆ ಏರುಪೇರಾದಲ್ಲಿ ವೈದ್ಯರ ಚೀಚಿಯನ್ನು ನೀವು ಕಳಿಸಿದ ವ್ಯಕ್ತಿಯನ್ನು ಮಾತ್ರ ಪ್ರಶ್ನಿಸಬಹುದು. ಇಲ್ಲದಿದ್ದರೆ ಔಷಧ ನಿಯಂತ್ರಣ  ಇಲಾಖೆಗೆ ದೂರು ನೀಡಬೇಕು. ಈಗಿರುವ ರೀತಿ ನಮ್ಮ ಔಷಧಿ ಅಂಗಡಿಯಂತೆ ನಿಮ್ಮ ಊರಿನಲ್ಲೇ ಖಾತರಿಪಡಿಸಿಕೊಳ್ಳುವ ಅವಕಾಶದಿಂದ ಔಷಧಿ ಗ್ರಾಹಕರು ವಂಚಿತರಾಗಲಿದ್ದಾರೆ. ನಕಲಿ ಮತ್ತು ಮಾದಕ ಔಷಧಗಳ ವ್ಯಾಪಾರ ಎಗ್ಗಿಲ್ಲದಂತೆ, ಇತಿಮಿತಿ ಇಲ್ಲದಂತೆ ನಡೆಯಲು ಇ-ಫಾರ್ಮಸಿ ರಹದಾರಿಯಾಗಲಿದೆಯೆಂಬುದನ್ನೂ ಕೇಂದ್ರ ಸರ್ಕಾರ ಮರೆಯಬಾರದು ಎಂದು ಅವರು ಎಚ್ಚರಿಸಿದರು. 

ಸಂಘದ ಅಧ್ಯಕ್ಷ ಪೋಪಟ್ ಲಾಲ್ ಎಂ.ಜೈನ್, ಜಂಟಿ ಕಾರ್ಯದರ್ಶಿ ಎಸ್.ರವಿಕುಮಾರ ನುಗ್ಗೇಹಳ್ಳಿ, ಜಿ.ಪಿ.ಯೋಗಾನಂದಸ್ವಾಮಿ, ಎಚ್.ಸಿ.ಲಿಂಗರಾಜು, ಕೆ.ಸಚಿನ್ ಆಚಾರ್ಯ, ಚಿದಂಬರ ದೀಕ್ಷಿತ್, ಕೆ.ಎನ್.ಶಂಕರ್, ಬಿ.ಮಲ್ಲಿಕಾರ್ಜುನ, ಎನ್.ರವಿಚಂದ್ರ ನಾಯಕ್, ಡಿ.ಪಿ.ಸುನಿಲಕುಮಾರ, ಎಸ್.ಎ.ಧನಂಜಯ, ವಿ.ಮಂಜುನಾಥ,  ಜೆ.ಎಸ್.ಲೋಕೇಶ ಇತರರು ಪ್ರತಿಭಟನೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News