ಜೀವ ಬೆದರಿಕೆ ಆರೋಪ: ಪತ್ನಿ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪತಿ

Update: 2018-10-02 14:20 GMT
ಡಾ.ಕ್ರಾಂತಿಕಿರಣ್- ಶೋಭಾ ದಂಪತಿ

ಹುಬ್ಬಳ್ಳಿ,ಅ.2: ಪತ್ನಿಯಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ನಗರದ ಖ್ಯಾತ ವೈದ್ಯ ಹಾಗೂ ರಾಜಕಾರಣಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ. 

ಹುಬ್ಬಳ್ಳಿಯ ಖ್ಯಾತ ನ್ಯೂರೋಲಜಿಸ್ಟ್ ಡಾ.ಕ್ರಾಂತಿಕಿರಣ್ ಎಂಬವರೇ ತನ್ನ ಪತ್ನಿಯ ವಿರುದ್ಧ ದೂರು ನೀಡಿದವರು. ವಿದ್ಯಾನಗರ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದು, ಐಪಿಸಿ ಸೆ.506,504,323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

'ಪತ್ನಿ ಶೋಭಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ. ಅದನ್ನು ಕೇಳಲು ಹೋದರೆ ತನ್ನ ಪ್ರಿಯಕರನ ಜೊತೆಗೂಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಪತ್ನಿ ಶೋಭಾ ಹಾಗೂ ಪ್ರಿಯಕರನಿಂದ ಜೀವ ಬೆದರಿಕೆ ಇದೆ ಎಂದು ಅವರು ದೂರಿನಲ್ಲಿ‌ ಉಲ್ಲೇಖಿಸಿದ್ದಾರೆ.

ಡಾ.ಕ್ರಾಂತಿಕಿರಣ ಹಾಗೂ ಶೋಭಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಶೋಭಾ ಕೂಡಾ ಹುಬ್ಬಳ್ಳಿಯ ಖ್ಯಾತ ವೈದ್ಯೆಯಾಗಿದ್ದು, ಇಬ್ಬರೂ ಸೇರಿ ಹುಬ್ಬಳ್ಳಿಯಲ್ಲಿ ದೊಡ್ಡ ಖಾಸಗಿ ಆಸ್ಪತ್ರೆ ಕಟ್ಟಿದ್ದರು. ಅಲ್ಲದೆ ಡಾ.ಕ್ರಾಂತಿಕಿರಣ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ವಿಧಾನಸಭೆಯಲ್ಲಿ ಹುಬ್ಬಳ್ಳಿ- ಧಾರವಾಡ ಪೂರ್ವ ಮೀಸಲು ಕ್ಷೇತ್ರ ಆಕಾಂಕ್ಷಿಯಾಗಿದ್ದರೂ, ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತ್ತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News