ಮಡಿಕೇರಿ: ಮಾಜಿ ಸೈನಿಕ ಆತ್ಮಹತ್ಯೆಗೆ ಶರಣು
Update: 2018-10-06 22:27 IST
ಮಡಿಕೇರಿ, ಅ.6 : ಜೀವನದಲ್ಲಿ ಜಿಗುಪ್ಸೆಗೊಂಡು ಮಾಜಿ ಸೈನಿಕರೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ಬಾವಲಿ ಗ್ರಾಮದಲ್ಲಿ ನಡೆದಿದೆ.
ಬಾವಲಿ ಗ್ರಾಮದ ಪೊನ್ನಚನ ಸೋಮಯ್ಯ (65) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ಶನಿವಾರ ಬೆಳಗ್ಗೆ ತಮ್ಮ ಕಾಫಿ ತೋಟದಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡಿದ್ದಾರೆ.
ಮೃತರ ಪತ್ನಿ ಹಾಗೂ ಪುತ್ರ ಈ ಹಿಂದೆಯೇ ಮೃತ ಪಟ್ಟಿದ್ದು, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸೊಸೆ ಎಮ್ಮೆಮಾಡು ಗ್ರಾಮದಲ್ಲಿ ಪುತ್ರನೊಂದಿಗೆ ವಾಸವಾಗಿದ್ದರು. ಮನೆಯಲ್ಲಿ ಒಬ್ಬಂಟಿಯಾಗಿದ್ದ ಸೋಮಯ್ಯ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿರಬೇಕೆಂದು ಶಂಕಿಸಲಾಗಿದ್ದು, ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.