ರಾಮ ಮಂದಿರ ಕಟ್ಟುವ ಬದಲು ದೇಶ ಅಭಿವೃದ್ಧಿಗೊಳಿಸಿ: ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಾಗ್ದಾಳಿ

Update: 2018-10-07 14:28 GMT

ಮೈಸೂರು,ಅ.7: ರಾಮಮಂದಿರ ಕಟ್ಟುವ ಬದಲು ದೇಶವನ್ನು ಅಭಿವೃದ್ಧಿಪಡಿಸಿ ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಾಗ್ದಾಳಿ ನಡೆಸಿದರು.

ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ರವಿವಾರ ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹಿಷ ದಸರಾ ಆಚರಿಸಿ  ಬಳಿಕ ಬಿ.ಬಸವಲಿಂಗಪ್ಪ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ “ಮಹಿಷ ಮಂಡಲ ಮಹಾದೊರೆ” ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಸಿ ಅವರು ಮಾತನಾಡಿದರು.

ದೇಶದಲ್ಲಿ ಸಾಕಷ್ಟು ಮಂದಿ ಊಟವಿಲ್ಲದೆ, ವಿದ್ಯಾಭ್ಯಾಸವಿಲ್ಲದೆ, ಮಲಗಲು ಜಾಗವಿಲ್ಲದೆ ಒದ್ದಾಡುತಿದ್ದಾರೆ. ಅವರ ಏಳಿಗೆಗೆ ದುಡಿಯಲು ಆಗದವರು ರಾಮಮಂದಿರ ಕಟ್ಟಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಗುಡುಗಿದ ಪ್ರೊ.ಕೆ.ಎಸ್.ಭಗವಾನ್, ಐದುವರ್ಷ ಅಧಿಕಾರಕ್ಕೆ ಬಂದ ಸಂವಿಧಾನದ ವಿರೋಧಿಗಳು, ತಮ್ಮ ತಪ್ಪನ್ನು ಮರೆಮಾಚಲು ಜನರ ಮನಸ್ಸನ್ನು ರಾಮಮಂದಿರದ ಕಡೆಗೆ ತಿರುಗಿಸುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಮಂದಿರ ಕಟ್ಟಲು ಉಪಯೋಗಿಸು ಕೋಟ್ಯಾಂತರ ಹಣವನ್ನು ಬಡವರು, ನಿರ್ಗತಿಕರು, ಶಾಲೆಗಳು ಮತ್ತು ಅಭಿವೃದ್ದಿಗಾಗಿ ಬಳಸಿ ಅದುಬಿಟ್ಟು ಧರ್ಮ ಮತ್ತು ಜಾತಿ ಜಾತಿಗಳ ನಡವೆ ಜಗಳ ಉಂಟುಮಾಡಬೇಡಿ, ದೆಹಲಿಯಲ್ಲಿ ಒಂದು ಲಕ್ಷ ಮಂದಿ ಬೀದಿಯಲ್ಲಿ ಮಲಗುತ್ತಿದ್ದಾರೆ. ಅಂತಹವರಿಗೆ ವಸತಿ ಕಲ್ಪಿಸಿ ಅವರ ಕಲ್ಯಾಣಕ್ಕಾಗಿ ಬಳಸಿ ಅದು ಬಿಟ್ಟು ನೀವು ದೇವಸ್ಥಾನ ಕಟ್ಟಿದರೆ ಪ್ರಯೋಜನವಿಲ್ಲ ಎಂದು ಹೇಳಿದರು.

ಸಂವಿಧಾನ ಈ ದೇಶದ ಧರ್ಮಗ್ರಂಥ, ಅಂತಹ ಧರ್ಮಗ್ರಂಥಕ್ಕೆ ಧಕ್ಕೆ ಉಂಟುಮಾಡುವ ರಾಜಕೀಯ ಪಕ್ಷಕ್ಕೆ ಮತ ಹಾಕಬೇಡಿ. ಮೂಲ ಸಂಸ್ಕೃತಿಯನ್ನು ನಾಶಗೊಳಿಸಿ ಮನುಸ್ಮ್ರುತಿಯನ್ನು ಬಿತ್ತಲು ಹೊರಟಿರುವ ರಾಜಕೀಯ ವ್ಯಕ್ತಿಗಳು ಮತ್ತು ಆ ಪಕ್ಷಕ್ಕೆ ಮತ ಹಾಕಬೇಡಿ. ರಾಜಕೀಯ ಪಕ್ಷಗಳು ಧರ್ಮ ಮತ್ತು ಜಾತಿ ಹೆಸರಿನಲ್ಲಿ ದೇಶದ ಜನರನ್ನು ಹೊಡೆದು ಹಾಕುತಿದ್ದಾರೆ. ರಾಜಕೀಯವೇ ಬೇರೆ ಧರ್ಮವೇ ಬೇರೆ ಎಂದು ಹೇಳಿದರು.

ನನ್ನ ವಿರುದ್ದ ಕೆಲವರು ಮಾತನಾಡುತಿದ್ದಾರೆ. ನನಗೆ ತುಂಬಾ ಸಂತೋಷ, ನನ್ನ ವಿಚಾರಗಳನ್ನು ಅವರು ಎಲ್ಲರಿಗೂ ತಲುಪುವಂತೆ ಮಾಡುತಿದ್ದಾರೆ. ಮಿತ್ರರು ಒಮ್ಮೆ ನನ್ನನ್ನು ನೆನಪು ಮಾಡಿಕೊಳ್ಳಬಹುದು. ಆದರೆ ವಿರೋಧಿಗಳು ಯಾವಾಗಲೂ ನನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಭಾರತ ದೇಶದಲ್ಲಿ ಸಂವಿಧಾನ ಮತ್ತು ಸಂಪ್ರದಾಯಗಳ ನಡುವೆ ಘರ್ಷಣೆ ಉಂಟಾಗಿದ್ದು,  ಸಂವಿಧಾನದ ಆಶಯಗಳನ್ನು ಕಾಪಾಡುವ ಮೂಲಕ ಮೂಲ ನಿವಾಸಿಗಳಾದ ನಾವುಗಳು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಎಂದು ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ಮೂಲ ಸಂಸ್ಕೃತಿ ಮತ್ತು ವಲಸೆ ಸಂಸ್ಕೃತಿ ಎಂಬ ವ್ಯವಸ್ಥೆಯಿದ್ದು,  ಮೂಲ ಸಂಸ್ಕೃತಿಯಲ್ಲಿ ಬೇದವಿಲ್ಲ, ವಲಸೆ ಸಂಸ್ಕೃತಿಯಲ್ಲಿ  ವರ್ಣವ್ಯವಸ್ಥೆ ಬೇದವಿದೆ ಅದನ್ನು ತೊಡೆದು ಹಾಕಬೇಕಾದ ಅನಿರ್ವಾಯತೆ ಇದೆ. ಜಾತಿ ವ್ಯವಸ್ಥೆ ಅವೈಜ್ಞಾನಿಕ,  ದೇಶದಲ್ಲಿ ವೈದ್ದಿಕ ಶಾಹಿಗಳು ತಮ್ಮ ಕಸುಬನ್ನು ಮಾಡುವ ಸಲುವಾಗಿ ಮೂಲನಿವಾಸಿಗಳಲ್ಲಿ ಹೊಡೆದಾಟವನ್ನು ಉಂಟುಮಾಡಿದರು. ದೇಶದ ದೊರೆಗಳನ್ನು ರಾಕ್ಷಸರುಗಳು ಎಂದು ಯಾರು ಹೇಳುತ್ತಿದ್ದಾರೋ ಅವರುಗಳು ರಾಕ್ಷಸರು ಎಂದು ಗುಡುಗಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಹುಟ್ಟಲಿಲ್ಲ ಎಂದಿದ್ದರೆ ನಮಗ್ಯಾರಿಗೂ ಉಳಿಗಾಲ ಇರುತ್ತಿರಲಿಲ್ಲ. ಅಂಬೇಡ್ಕರ್ ಒಂದು ಜಾತಿಗೆ ಅಥವಾ ವರ್ಗಕ್ಕೆ ಸೀಮಿತರಾದವರಲ್ಲ, ಅವರು ಎಲ್ಲರಿಗೂ ಬೇಕಾದವರು. ಎಲ್ಲಾ ಜನಾಂಗದವರಿಗೂ ಅನುಕೂಲ ಮಾಡಿಕೊಟ್ಟ ವಿಶ್ವಜ್ಞಾನಿ ಎಂದು ಬಣ್ಣಿಸಿದರು.

ವೈದಿಕ ಶಾಹಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜನರಿಗೆ ಸುಳ್ಳು ಬಾವನೆ ಬಿತ್ತಿ ಎದುರಿಸುತಿದ್ದಾರೆ. ಅದಕ್ಕೆ ಪೂರಕ ಎನ್ನುವಂತೆ ಟಿ.ವಿ.ಗಳಲ್ಲಿ ದಿನನಿತ್ಯ ಜೋತಿಷ್ಯದ ಕಾರ್ಯಕ್ರಮಗಳನ್ನು ಮಾಡಿ ಜನರನ್ನು ಅಂಧತ್ವಕ್ಕೆ ತಳ್ಳಲಾಗುತಿದೆ. ಮೂಲನಿವಾಸಿಗಳನ್ನು ಹೆದರಿಸಿ ಹಣ ಸಂಪಾದನೆ ಮಾಡಿ ಮನುವಾದಿಗಳು ತಿಂದು ತೇಗುತ್ತಿದ್ದಾರೆ. ಹಾಗಾಗಿ ಯಾವ ದೇವರು ದಿಂಡಿರನ್ನು ಬಿಟ್ಟು ಮೊದಲು ಗ್ರಂಥಾಲಯಗಳಿಗೆ ಹೋಗಿ ಜ್ಞಾನ ಸಂಪಾದನೆ ಮಾಡಿಕೊಳ್ಳಿ ಎಂದು ಕರೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News