ಕೆ.ಆರ್.ಪೇಟೆ: ಆಟವಾಡಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು
Update: 2018-10-08 14:23 GMT
ಕೆ.ಆರ್.ಪೇಟೆ, ಅ.8: ಆಟವಾಡಲು ಹೋದ ಐದು ವರ್ಷದ ಬಾಲಕ ಹಳ್ಳದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ.
ಕೃಷ್ಣರಾಜಪೇಟೆ ಪಟ್ಟಣದ ಕೆ.ಎನ್.ತಮ್ಮಣ್ಣಗೌಡ ನಗರದ ನಿವಾಸಿ ಮಂಜುನಾಥ್ ಅವರ ಪುತ್ರ ಪ್ರಥಮ್(5) ಸಾವನ್ನಪ್ಪಿದ ಬಾಲಕ.
ಪೋಷಕರ ಜತೆ ತಾಲೂಕಿನ ಹಳಿಯೂರು ಗ್ರಾಮಕ್ಕೆ ಪಿತೃಪಕ್ಷದ ಹಬ್ಬಕ್ಕೆ ತೆರಳಿದ್ದ ಪ್ರಥಮ್ ರವಿವಾರ ಮಧ್ಯಾಹ್ನ ನಾಪತ್ತೆಯಾಗಿದ್ದ.
ಎಲ್ಲೆಡೆ ಹುಡುಕಾಟ ನಡೆಸಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಸೋಮವಾರ ಬೆಳಗ್ಗೆ ಗ್ರಾಮದ ಹಳ್ಳದಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಆಟವಾಟಲು ತೆರಳಿದ್ದ ವೇಳೆ ಪ್ರಥಮ್ ಹಳ್ಳದಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಈ ಸಂಬಂಧ ಎಸ್ಸೈ ಆನಂದಗೌಡ ತನಿಖೆ ಕೈಗೊಂಡಿದ್ದಾರೆ.