ಸಚಿವ ಪುಟ್ಟರಾಜುಗೆ ರಾಜಕಾರಣ ಗೊತ್ತಿಲ್ಲ: ಚೆಲುವರಾಯಸ್ವಾಮಿ

Update: 2018-10-09 15:07 GMT

ಬೆಂಗಳೂರು, ಅ.9: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜುವಿಗೆ ನಿಜವಾದ ರಾಜಕಾರಣ ಗೊತ್ತಿಲ್ಲ. ನನ್ನನ್ನು ಟೀಕಿಸಲು ತಮ್ಮ ಸಚಿವ ಸ್ಥಾನವನ್ನು ಬಳಸುತ್ತಿದ್ದಾರೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಕಿಡಿಕಾರಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸೋತಿರುವುದರ ಬಗ್ಗೆ ಪ್ರಸ್ತಾಪಿಸಿ ಅಣಕವಾಡಿರುವ ಸಚಿವ ಸಿ.ಎಸ್.ಪುಟ್ಟರಾಜುಗೆ ರಾಜಕಾರಣದಲ್ಲಿ ಸೋಲು-ಗೆಲುವುಗಳು ತಾತ್ಕಾಲಿಕ ಎಂಬುದು ಗೊತ್ತಿಲ್ಲದವರಂತೆ ಮಾತನಾಡುತ್ತಿದ್ದಾರೆ. ಸಚಿವ ಸ್ಥಾನ ಅವರನ್ನು ಹಾಗೆ ಮಾತನಾಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಅಂತರದಲ್ಲಿ ಸೋತಿದ್ದರು ಅನ್ನೋದು ಸಚಿವ ಪುಟ್ಟರಾಜು ನೆನಪು ಮಾಡಿಕೊಳ್ಳಲಿ. ರಾಜಕಾರಣದಲ್ಲಿ ಸೋಲು-ಗೆಲುವುಗಳು ಕ್ಷಣಿಕವಾಗಿದ್ದು, ಸಚಿವ ಪುಟ್ಟರಾಜು ಮೂರ್ಖತನದ ರೀತಿಯಲ್ಲಿ ಮಾತನಾಡಬಾರದು ಎಂದು ಅವರು ಹೇಳಿದರು.

ಸಮ್ಮಿಶ್ರ ಸರಕಾರದಲ್ಲಿ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರ ಕೆಲಸಗಳು ನಡೆಯುತ್ತಿಲ್ಲ. ಅದರೂ ವರಿಷ್ಠರ ನಿರ್ಧಾರದಂತೆ ಮೈತ್ರಿ ಸರಕಾರಕ್ಕೆ ನಾವು ಬದ್ಧರಾಗಿದ್ದೇವೆ. ಹೀಗಾಗಿ ಸಚಿವ ಪುಟ್ಟರಾಜು ಹೇಳಿಕೆಗಳ ಕುರಿತು ಎರಡು ಪಕ್ಷಗಳ ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News