ತುಮಕೂರು: ಸೆಲ್ಫಿ ಹುಚ್ಚಿಗೆ ನೀರು ಪಾಲಾದ ಮೂವರು ವಿದ್ಯಾರ್ಥಿಗಳು
ತುಮಕೂರು, ಅ.15: ಕೆರೆಯ ಬಳಿಗೆ ಹೋದ ಮೂವರು ವಿದ್ಯಾರ್ಥಿಗಳು ಸೆಲ್ಫಿ ಹುಚ್ಚಿನಿಂದಾಗಿ ನೀರು ಪಾಲಾದ ಘಟನೆ ದಾಬಸಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ನಿಜಗಲ್ ಕೆರೆಯಲ್ಲಿ ನಡೆದಿದೆ.
ತುಮಕೂರಿನ ಸಿದ್ದಗಂಗಾ ಪಿಯು ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿ ಪೂರ್ಣಚಂದ್ರ (18) ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳಾದ ನೂರ್ ತಾಜ್ (17) ಮತ್ತು ಶಶಾಂಕ್ (17) ನಿರುಪಾಲಾದವರು.
ಕಾಲೇಜಿನಿಂದ 31 ಬಾಲಕರು, 20 ಬಾಲಕಿಯರು ಸೇರಿ ಒಟ್ಟು 51 ಮಂದಿ ವಿದ್ಯಾರ್ಥಿಗಳು ದೇವರಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಎನ್ನೆಸ್ಸೆಸ್ ಕ್ಯಾಂಪ್ಗಾಗಿ ಬಂದಿದ್ದರು.
ವಿದ್ಯಾರ್ಥಿಗಳು ಕಳೆದ ಅ.10 ರಂದು ಕಾಲೇಜಿನಿಂದ ಎನ್ನೆಸ್ಸೆಸ್ ಕ್ಯಾಂಪ್ಗೆ ಬಂದಿದ್ದರು. ಇಂದು ಬೆಳಗ್ಗೆ ತಿಂಡಿ ತಿಂದು ಹಳೆ ನಿಜಗಲ್ ಕೆರೆಯ ಬದಿಯ ಕೋಡಿ ಸಿದ್ದೇಶ್ವರಸ್ವಾಮಿ ದೇವಾಲಯದ ಸ್ವಚ್ಚತೆಗೆಂದು ಬಂದಿದ್ದಾರೆ. ಇದೇ ವೇಳೆ ಈ ಮೂವರು ವಿದ್ಯಾರ್ಥಿಗಳು ಪಕ್ಕದಲ್ಲಿಯೇ ಇದ್ದ ಕೆರೆಯ ದಂಡೆಯಲ್ಲಿ ನಿಂತು ಸೆಲ್ಪಿ ಪೊಟೋ ತೆಗೆಯಲು ಮುಂದಾಗಿದ್ದಾರೆ. ಈ ಸಂದರ್ಭ ಪೂರ್ಣಚಂದ್ರ ಜಾರಿ ನೀರಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಮುಂದಾದ ನೂರ್ ತಾಜ್ ಮತ್ತು ಶಶಾಂಕ್ ಇಬ್ಬರೂ ಕೂಡಾ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ. ಇವರನ್ನು ರಕ್ಷಣೆಗೆ ಮುಂದಾದ ಕ್ಯಾಂಪ್ ಆಫೀಸರ್ ಸಹ ಜಾರಿ ನೀರಿಗೆ ಬಿದ್ದಿದ್ದಾರೆ. ಅಕ್ಕಪಕ್ಕದಲ್ಲಿ ಹುಡುಗರು ಕ್ಯಾಂಪ್ ಆಫೀಸರ್ ಅವರನ್ನು ರಕ್ಷಿಸಿದ್ದು, ಆದರೆ ಸಹಪಾಠಿಗಳನ್ನು ರಕ್ಷಿಸಲು ಸಾಧ್ಯವಾಗದೆ ಅವರು ನಾಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾಬಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.