ವಸತಿ ವಿನ್ಯಾಸಗಳಲ್ಲಿನ ಸಾರ್ವಜನಿಕ ಉದ್ದೇಶಗಳ ನಿವೇಶನಗಳ ಸಮೀಕ್ಷೆ ಸಮರೋಪಾದಿಯಲ್ಲಿ ಕೈಗೊಳ್ಳಿ: ಸಚಿವ ದೇಶಪಾಂಡೆ

Update: 2018-10-17 16:57 GMT

ಧಾರವಾಡ,ಅ.17: ಹೊಸ ವಸತಿ ವಿನ್ಯಾಸಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ನಿವೇಶನಗಳ ಸಮೀಕ್ಷಾ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡು, ಶಾಲೆ, ಹಾಸ್ಟೆಲ್ ನಿರ್ಮಾಣಕ್ಕೆ ಆದ್ಯತೆಯಡಿ ಒದಗಿಸಬೇಕು. ಪ.ಜಾತಿ ಹಾಗೂ ಪ.ಪಂಗಡಗಳ ವಿದ್ಯಾರ್ಥಿಗಳೂ ಸೇರಿದಂತೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಯಾವ ಭಾಗದಲ್ಲಿ ಹೆಚ್ಚಿನ ಪ್ರವೇಶ ಆಗುತ್ತಿದೆಯೋ ಅಲ್ಲಿ ಭಾಡಿಗೆ ಕಟ್ಟಡಗಳನ್ನು ಗುರುತಿಸಿ, ಹೊಸ ಹಾಸ್ಟೆಲ್ ಸ್ಥಾಪಿಸಲು ಪ್ರಸ್ತಾವನೆ ಕಳಿಸಿದರೆ ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ಕೊಡಿಸಲಾಗುವದು ಎಂದು ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಜಿಪಂ ಸಭಾಂಗಣದಲ್ಲಿಂದು ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರ ಪ್ರದೇಶಗಳಲ್ಲಿ ಹೊಸ ಲೇಔಟ್ ಗಳಿಗೆ ಅನುಮತಿ ನೀಡುವಾಗ ಕಡ್ಡಾಯವಾಗಿ ಸಾರ್ವಜನಿಕ ಉದ್ದೇಶಕ್ಕೆ ಸಿ.ಎ.ನಿವೇಶನ ಮೀಸಲಿಡಬೇಕು. ಅವುಗಳನ್ನು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್ ಹಾಗೂ ಶಾಲೆಗಳಿಗೆ ಆದ್ಯತೆಯ ಮೇಲೆ ಒದಗಿಸಬೇಕು ಎಂದು ಸೂಚಿಸಿದರು.

ಅವಳಿ ನಗರದಲ್ಲಿ 3 ಇಂದಿರಾ ಕ್ಯಾಂಟೀನ್ ಆರಂಭವಾಗಿವೆ. ಉಳಿದ 9 ಕ್ಯಾಂಟೀನ್ ಗಳನ್ನು ಶೀಘ್ರ ಆರಂಭಿಸಬೇಕು ಎಂದರು. ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಹಣ ಲಭ್ಯವಿದೆ. ಅದನ್ನು ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅವಳಿ ನಗರದಲ್ಲಿ ಸ್ವಚ್ಚತಾ ಪ್ರಮಾಣ ಸುಧಾರಣೆ ಆಗಬೇಕು. ಇದನ್ನು ಅನುಷ್ಠಾನಗೊಳಿಸಲು ಕೊರತೆಗಳೇನು ಎಂದು ಪಾಲಿಕೆ ಆಯುಕ್ತರಿಂದ ಮಾಹಿತಿ ಪಡೆದರು. 

ಅರಣ್ಯವಾಸಿಗಳ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡ ( ಎಸ್.ಟಿ) ಹಾಗೂ ಇತರ ಬುಡಕಟ್ಟುಗಳಿಗೆ ನಿಯಮಾನುಸಾರ ತ್ವರಿತವಾಗಿ ಹಕ್ಕು ಪತ್ರ ವಿತರಿಸಬೇಕು. ಅವರ ಹಕ್ಕಿಗೆ ನ್ಯಾಯ ಒದಗಿಸಬೇಕು. ಬಹುತೇಕ ಅಧಿಕಾರಿಗಳು ಬಡ ಮತ್ತು ಮಧ್ಯಮ ವರ್ಗದಿಂದ ಬಂದವರಾಗಿರುತ್ತೀರಿ.  ಜನಸಾಮಾನ್ಯರು ಮತ್ತು ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ವರ್ತಿಸಿ, ಸ್ಪಂದನೆ ನೀಡಬೇಕು. ಕಾನೂನು ಪ್ರಕಾರ ಆಗಬೇಕಾದ ಎಲ್ಲ ಕೆಲಸಗಳು ವಿಳಂಬವಿಲ್ಲದೇ ಆಗಬೇಕು. ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ಉಪವಿಭಾಗಾಧಿಕಾರಿಗಳು ನಿರಂತರವಾಗಿ ಗ್ರಾಮೀಣ ಪ್ರದೇಶಗಳಿಗೆ, ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಗುಣಮಟ್ಟ ಪರೀಕ್ಷಿಸಬೇಕು. ನಿಮ್ಮ ಹಂತದಲ್ಲಿ ಸಾಧ್ಯವಿರುವ ಪರಿಹಾರ ಒದಗಿಸಬೇಕು, ಇಲ್ಲವಾದರೆ ಸರಕಾರಕ್ಕೆ ವರದಿ ಸಲ್ಲಿಸಬೇಕು. ಬೆಳೆವಿಮೆ, ಬೆಳೆ ಪರಿಹಾರ ಪಾವತಿಯಲ್ಲಿ  ತಾಂತ್ರಿಕ ದೋಷಗಳನ್ನು ತ್ವರಿತವಾಗಿ ಸರಿಪಡಿಸಬೇಕು.

ಈ ಹಿಂದಿನ ಸರಕಾರವು ಸಹಕಾರ ಸಂಘಗಳಲ್ಲಿದ್ದ ರೈತರ ಸಾಲವನ್ನು 50 ಸಾವಿರ ರೂ.ವರೆಗೆ ಮನ್ನಾ ಮಾಡಿತ್ತು. ಅದಕ್ಕಾಗಿ 8641 ಕೋಟಿ ರೂ.ಗಳನ್ನು ಬ್ಯಾಂಕುಗಳು ರೈತರ ಸಾಲದ ಖಾತೆಗಳಿಗೆ ಜಮೆ ಮಾಡಲಾಗಿದೆ. ಈಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲಗಳನ್ನು ದೊಡ್ಡ ಪ್ರಮಾಣದಲ್ಲಿ ಮನ್ನಾ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ, ಸಾಲ ಮರುಪಾವತಿ ಹಂತಗಳನ್ನು ನಿರ್ಧರಿಸಿದ್ದಾರೆ ಎಂದು ಸಚಿವ ದೇಶಪಾಂಡೆ ಹೇಳಿದರು.

ಸಂಸದ ಪ್ರಹ್ಲಾದ್ ಜೋಷಿ ಮಾತನಾಡಿ, ಅವಳಿನಗರದಲ್ಲಿ ಕುಡಿಯುವ ನೀರು ಪೂರೈಸುವ ಅವಧಿಯನ್ನು ಉತ್ತಮಪಡಿಸಬೇಕು. ಕನಿಷ್ಠ 5-6 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸುವ ಕ್ರಮ ಕೈಗೊಳ್ಳಬೇಕು. ಅವಳಿನಗರದಲ್ಲಿ ನಿರ್ಮಿಸಲಾಗಿರುವ ರಸ್ತೆಗೆ ಹೊಂದಿಕೊಂಡು ಪಾದಚಾರಿಗಳಿಗೆ ಪೇವರ್ಸ ಗಳನ್ನು ಅಳವಡಿಸಲಾಗಿದೆ. ಆದರೆ ಅದರ ಮೇಲಿನ ಮಣ್ಣು ತೆರವುಗೊಳಿಸದಿರುವದರಿಂದ ಧೂಳು ಅಧಿಕವಾಗಿದೆ. ತಕ್ಷಣ ಅದನ್ನು ಸರಿಪಡಿಸಬೇಕು ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಅವಳಿ ನಗರದಲ್ಲಿ ಸೋರಿಕೆಯಾಗುತ್ತಿರುವ ಕುಡಿಯುವ ನೀರನ್ನು ತಡೆಯಲು ಪಾಲಿಕೆ ನಿಗಾವಹಿಸುತ್ತಿದೆ. ಇದರಿಂದ ಸಮಸ್ಯೆ ನಿರ್ಮೂಲನೆಗೆ ಸಹಕಾರಿಯಾಗಲಿದೆ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಮಾತನಾಡಿ, ಅವಳಿ ನಗರದಲ್ಲಿ ಕಟ್ಟು ನಿಟ್ಟಾಗಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತಿದೆ. ಗಾಂಜಾ ಸಂಗ್ರಹ ಮತ್ತು ಮಾರಾಟಗಾರರ ವಿರುದ್ಧ 8 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಶಕೀಲ ಅಹ್ಮದ್ ಅವರು, ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ 341 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದಿದೆ. 100 ಕೋಟಿ ರೂಪಾಯಿ ಗಳ ಕಾಮಗಾರಿಗಳಿಗೆ ಶೀಘ್ರ ಟೆಂಡರ್ ಕರೆಯಲಾಗುವುದು. ಅವಳಿನಗರಗಳಲ್ಲಿ ಈಗ ಸ್ವಚ್ಚತಾ ಕಾರ್ಯ ಸುಧಾರಣೆಯಾಗಿದೆ. ಈ ಹಿಂದೆ ದೇಶದಲ್ಲಿ 62ನೇ ರ್ಯಾಂಕಿಂಗ್ ನಲ್ಲಿದ್ದ ಅವಳಿ ನಗರದ ಸ್ಥಾನ ಈಗ 42 ನೇ ಸ್ಥಾನಕ್ಕೇರಿದೆ. ಇನ್ನಷ್ಟು ಕಸ ಸಂಗ್ರಹಣಾ ವಾಹನಗಳು ಬರಲಿವೆ. ಕಸ ಸಂಗ್ರಹಣಾ ಘಟಕ ನಗರದಿಂದ ದೂರ ಇದೆ. ಈಗ ಘನ ತ್ಯಾಜ್ಯ ವಿಲೇವಾರಿಗೆ 60 ಕೋಟಿ ರೂ. ಬಂದಿದೆ. ಇನ್ನಷ್ಟು ವಾಹನಗಳ ಮೂಲಕ ಸ್ವಚ್ಚತಾ ಕಾರ್ಯ ಸುಧಾರಿಸಲಾಗುವದು ಎಂದರು.

ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಚನ್ನಮ್ಮ ಶಿವನಗೌಡರ, ನಿಂಗಪ್ಪ ಘಾಟೀನ್, ಕಲ್ಲಪ್ಪ ಪುಡಕಲಕಟ್ಟಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News