ಕೊಳ್ಳೇಗಾಲ: ರಸ್ತೆ ಅಪಘಾತಕ್ಕೆ ಯುವಕ ಬಲಿ
ಕೊಳ್ಳೇಗಾಲ,ಅ.20: ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಉಂಟಾದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಪಟ್ಟಣದ ಮುಡಿಗುಂಡದ ಬಳಿ ನಡೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೊಡಾಲ ಗ್ರಾಮದ ಸೋಮಶೇಖರ್(18) ಸಾವನ್ನಪ್ಪಿರುವ ಯುವಕ. ಮತ್ತೊಬ್ಬ ಬೈಕ್ ಸವಾರ ಹಲಗೂರು ತಾಲೂಕಿನ ಶಶಿಕುಮಾರ್ ಎಂಬಾತ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತ ಯುವಕ ಸೇರಿದಂತೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಒಟ್ಟು 6 ಮಂದಿ ದಸರಾ ರಜೆ ಹಿನ್ನಲೆಯಲ್ಲಿ 4 ಬೈಕ್ನಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳಿ ಟಿ.ನರಸೀಪುರದ ತಮ್ಮ ಸ್ನೇಹಿತನ ಮನೆಗೆ ಹೋಗಲು ಪಟ್ಟಣ ಮಾರ್ಗವಾಗಿ ಹೋಗುತ್ತಿದ್ದರು. ಇವರಲ್ಲಿ ಶಶಿಕುಮಾರ್ ಮತ್ತು ಸೋಮಶೇಖರ್ ಚಲಿಸುತ್ತಿದ್ದ ಬೈಕ್ನ್ನು ಹಿಂದಿಕ್ಕಲು ಬಂದ ಸಾರಿಗೆ ಬಸ್ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸೋಮಶೇಖರ್ ಮೃತಪಟ್ಟಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ರಾಜಣ್ಣ, ಪಿಎಸ್ಐ ವೀಣಾ ನಾಯಕ್ ಮೃತನ ಸಹೋದರನಿಂದ ದೂರು ದಾಖಲಿಸಿಕೊಂಡು ಶವವನ್ನು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿ ಸರ್ಕಾರಿ ವೈದ್ಯಾಧಿಕಾರಿ ಡಾ.ನಾರಾಯಣ್ರವರಿಂದ ಶವಪರೀಕ್ಷೆ ನಡೆಸಿದ ನಂತರ ಅವರ ವಾರಸುದಾರರಿಗೆ ಒಪ್ಪಿಸಲಾಯಿತು.