ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ತೆಪ್ಪೋತ್ಸವ

Update: 2018-10-20 17:27 GMT

ಹನೂರು,ಅ.20: ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ರಾತ್ರಿ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವವು ವಿಜೃಂಭಣೆಯಿಂದ ನಡೆಯಿತು. 

ಕಳೆದ ಎರಡು ದಿನಗಳ ಕಾಲ ನಡೆದ ಆಯುಧ ಪೂಜಾ ಜಾತ್ರಾ ಮಹೋತ್ಸವದಲ್ಲಿ ಮಾದಪ್ಪನ ಸನ್ನಿಧಿಯನ್ನು ವಿವಿಧ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಳಿಸಲಾಗಿತ್ತಲ್ಲದೇ, ದೇವಸ್ಥಾನದ ಮುಂಭಾಗದ ರಸ್ತೆಗಳನ್ನು ಕೂಡ ವಿದ್ಯುತ್ ದೀಪಾಲಂಕಾರದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಮಾದಪ್ಪನ ದರ್ಶನ ಪಡೆದರು. 

ತೆಪ್ಪೋತ್ಸವದ ಅಂಗವಾಗಿ ರಾತ್ರಿ 9 ಗಂಟೆಗೆ ಸ್ವಾಮಿಗೆ ನೈವೇದ್ಯ ಅರ್ಪಿಸಿದ ಬಳಿಕ ಸ್ವಾಮಿಯ ಉತ್ಸವಮೂರ್ತಿಯನ್ನು ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಲಂಕಾರದಿಂದ ಸಿಂಗಾರ ಮಾಡಿದ್ದ ಬಿಳಿ ಬಣ್ಣದ ಕುದುರೆ ವಾಹನದಲ್ಲಿ ಕುಳ್ಳಿರಿಸಲಾಯಿತು. ಬಳಿಕ ಸತ್ತಿಗೆ, ಸೂರಿಪಾನಿ ಹಾಗೂ ಮಂಗಳ ವಾದ್ಯಮೇಳದೊಂದಿಗೆ ಸಾಲೂರು ಬೃಹನ್ಮಠಾಧ್ಯಕ್ಷ ಗುರುಸ್ವಾಮೀಜಿ ನೇತೃತ್ವದಲ್ಲಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಮೆರವಣಿಗೆಯ ಮೂಲಕ ದೇಗುಲಕ್ಕೆ ಆಗಮಿಸಿದ ಅರ್ಚಕ ವೃಂದ ಸ್ವಾಮಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು.  

ವಿಜೃಂಭಣೆಯ ತೆಪ್ಪೋತ್ಸವ: ವಿವಿಧ ಪುಷ್ಪ ಹಾಗೂ ವಿವಿಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವಿಶೇಷವಾಗಿ ಅಲಂಕರಿಸಲಾಗಿದ್ದ ತೆಪ್ಪದಲ್ಲಿ ಮಾದಪ್ಪನ ವಿಗ್ರಹಮೂರ್ತಿಯನ್ನು ಕುಳ್ಳಿರಿಸಿ ಧಾರ್ಮಿಕ ವಿಧಿವಿಧಾನದ ಮೂಲಕ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ದೇಗುಲದ ಸಮೀಪದ ಕೊಳದಲ್ಲಿ ರಾತ್ರಿ 10.30ರಲ್ಲಿ ತೆಪ್ಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಈ ಮೂಲಕ ಅಯುಧಪೂಜೆ ಜಾತ್ರ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. 

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿ, ಉಪ ಕಾರ್ಯದರ್ಶಿ ರಾಜಶೇಖರಮೂರ್ತಿ, ಬೇಡಗಂಪಣ ಅರ್ಚಕರು ಹಾಗೂ ದೇಗುಲದ ನೌಕರರು ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News