ತನ್ವೀರ್ ಸೇಠ್ ಉಸ್ತುವಾರಿ ಸಚಿವರಾಗಿದ್ದಾಗ ನಡೆಸಿದ ರೀತಿಯಲ್ಲೇ ದಸರಾ ಆಚರಣೆ: ಸಚಿವ ಸಾ.ರಾ.ಮಹೇಶ್

Update: 2018-10-21 17:02 GMT

ಮೈಸೂರು,ಅ.21: ಶಾಸಕ ತನ್ವೀರ್ ಸೇಠ್ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಹೇಗೆ ದಸರಾ ಆಚರಣೆ ಮಾಡಿದ್ದರೋ, ಅದೇ ರೀತಿ ನಾವು ಸಹ ದಸರಾ ಆಚರಣೆ ಮಾಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದರು.

ಅರಮನೆ ಆವರಣದಲ್ಲಿ ರವಿವಾರ ಗಜಪಡೆಗಳನ್ನು ಬೀಳ್ಕೊಟ್ಟು ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ದಸರಾ ಕುರಿತು ಟೀಕೆ ಮಾಡಿದ್ದ ಶಾಸಕ ತನ್ವೀರ್ ಸೇಠ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಶಾಸಕ ತನ್ವೀರ್ ಸೇಠ್ ಮಾಡಿರುವ ಆರೋಪ ಅವರ ವೈಯಕ್ತಿಕ. ಕಾಂಗ್ರೆಸ್ ಪಕ್ಷಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಅವಧಿಯಲ್ಲಿ ಹೇಗೆ ದಸರಾ ಆಚರಿಸಲಾಗಿತ್ತು, ಅದೇ ರೀತಿ ನಾವು ಸಹ ಮಾಡಿದ್ದೇವೆ. ಪಾಸ್‍ಗಳನ್ನು ಅವರಿಗೂ ಸಹ ನೀಡಿದ್ದೇವೆ. ಅವರು ಕೂಡ ಪಾಸ್‍ಗಳನ್ನು ಪಡೆದುಕೊಂಡಿದ್ದಾರೆ. ಪಾಸ್‍ಗಳ ದುರ್ಬಳಕೆ ಆರೋಪಕ್ಕೆ ಶ್ವೇತ ಪತ್ರ ಹೊರಡಿಸಲಿ ಎಂದು ಹೇಳಿದ್ದಾರೆ. ಅವರ ಕಾಲದಲ್ಲಿ ಶ್ವೇತಪತ್ರ ಹೊರಡಿಸಿದ್ದರೆ ನಾವು ಅದೇ ರೀತಿ ಮಾಡುತ್ತೇವೆ. ಗಜಪಡೆ ಸ್ವಾಗತ ಸಂದರ್ಭದಲ್ಲಿ ತನ್ವೀರ್ ಸೇಠ್ ಬಂದಿದ್ದರೂ, ದಸರಾ ಉತ್ಸವದಲ್ಲಿ ಪಾಲ್ಗೊಳ್ಳದಿರುವುದು ಅವರ ವೈಯಕ್ತಿಕ ಎಂದು ಹೇಳಿದರು.

ನಾಡಹಬ್ಬ ದಸರಾ ಸಲುವಾಗಿ ನಾವು ಸುಮ್ಮನಿದ್ದೆವು. ಇನ್ನು ಮುಂದೆ ನಾವು ಏನೆಂದು ತೋರಿಸುತ್ತೇವೆ ಎಂದು ತನ್ವೀರ್ ಸೇಠ್ ಎಚ್ಚರಿಕೆ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಸಾ.ರಾ.ಮಹೇಶ್, ಕಾಂಗ್ರೆಸ್ ಪಕ್ಷದ ವತಿಯಿಂದ ಈ ರೀತಿ ಹೇಳಿಲ್ಲ. ತನ್ವೀರ್ ವೈಯಕ್ತಿಕ ಅಭಿಪ್ರಾಯವಷ್ಟೆ, ಪಕ್ಷದ ವಿಚಾರ ಬಂದರೆ ವರಿಷ್ಠರು ಕುಳಿತು ತೀರ್ಮಾನಿಸುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News