ಮಡಿಕೇರಿ: ಬಾವಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ
Update: 2018-10-22 19:22 IST
ಮಡಿಕೇರಿ, ಅ.22: ನಗರದ ಕೊಹಿನೂರು ರಸ್ತೆಯ ಕಟ್ಟಡದ ಹಿಂಭಾಗದ ಬಾವಿಯೊಂದರಲ್ಲಿ ಕೂಲಿ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.
ಮೂಲತಃ ಕೇರಳದ ಕಣ್ಣ (54) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದು, 3 ದಿನಗಳ ಹಿಂದೆ ಕಾಲು ಜಾರಿ ಬಾವಿಗೆ ಬಿದ್ದಿರಬಹುದೆಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿ ಕಣ್ಣ ಹಲವು ವರ್ಷಗಳ ಹಿಂದೆ ಮಡಿಕೇರಿಗೆ ಬಂದು ನೆಲೆಸಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಕಟ್ಟಡವೊಂದರ ಬಾವಿಯ ಪಕ್ಕದಲ್ಲಿರುವ ಅತೀ ಚಿಕ್ಕದಾದ ಪಂಪ್ ಹೌಸ್ ಕೊಠಡಿಯಲ್ಲಿ ರಾತ್ರಿ ಕಳೆಯುತ್ತಿದ್ದ ಎನ್ನಲಾಗಿದ್ದು, ಮದ್ಯ ವ್ಯಸನವನ್ನು ಮೈಗೂಡಿಸಿಕೊಂಡಿದ್ದರು ಎಂದು ಹೇಳಲಾಗಿದೆ.
ಸಾರ್ವಜನಿಕರ ಸಹಕಾರದಿಂದ ಮೃತದೇಹವನ್ನು ಹೊರತೆಗೆದಿರುವ ಪೊಲೀಸರು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಠಾಣಾಧಿಕಾರಿ ಷಣ್ಮುಗ ಮತ್ತು ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿದರು.