×
Ad

ಜ.6 ರಿಂದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

Update: 2018-10-23 19:41 IST

ಬೆಂಗಳೂರು, ಅ.23: ಧಾರವಾಡದಲ್ಲಿ ಡಿ.7 ರಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.6 ಕ್ಕೆ ಮುಂದೂಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಕಸಾಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ತೀರ್ಮಾನಿಸಿದಂತೆ ಡಿ.7 ರಿಂದ 9ರವರೆಗೆ ಸಮ್ಮೇಳನ ನಡೆಯಬೇಕಿತ್ತು. ಆದರೆ ಪೂರ್ವಸಿದ್ಧತೆಗಳು ಮತ್ತಷ್ಟು ಕೈಗೊಳ್ಳಬೇಕಾಗಿರುವುದರಿಂದ ಜನವರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪೂರ್ವನಿಗದಿಯಂತೆ ಧಾರವಾಡದಲ್ಲಿ ಸಮ್ಮೇಳನ ನಡೆಯುತ್ತದೆ. ಇದೀಗ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಹೇಳಿದರು.

ಧಾರವಾಡದಲ್ಲಿ 61 ವರ್ಷಗಳ ಬಳಿಕ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಯಾವ ವಿಷಯದ ಗೋಷ್ಠಿಗಳು ಇರಬೇಕು ಎಂಬುದರ ಬಗ್ಗೆ ತಜ್ಞರಾದ ಸಿ.ಎನ್. ರಾಮಚಂದ್ರನ್, ಡಾ. ನೀಲಗಿರಿ ತಳವಾರ್, ಎಲ್.ಎನ್. ಮುಕುಂದರಾಜ್, ಡಾ. ಕೆ.ಶಾರದಾ, ರಾಜೇಶ್ವರಿ ಮಹೇಶ್ವರಯ್ಯ, ಪದ್ಮರಾಜ ದಂಡಾವತಿಯವರ ನೇತೃತ್ವದಲ್ಲಿ ಸಮಿತಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಬಾರಿಯ ಗೋಷ್ಠಿಗಳಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗುವುದು. ಜತೆಗೆ ಮಹದಾಯಿ, ಕೃಷ್ಣ ಸೇರಿದಂತೆ ನೀರಾವರಿ ಸಮಸ್ಯೆಗಳು, ಗಡಿ ಸಮಸ್ಯೆಗಳು ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷವಾಗಿ ಚರ್ಚೆಯಾಗಲಿವೆ. ಮಹಿಳಾ ಸಂವೇದನೆ, ದಲಿತ ಅಸ್ಮಿತೆ, ಕನ್ನಡ ಚಲನಚಿತ್ರ ಮತ್ತು ಕಿರುತೆರೆ, ವೈಚಾರಿಕತೆ ಮತ್ತು ಅಸಹಿಷ್ಣುತೆ, ಮರು ಓದು ಪ್ರಾಚೀನ ಸಾಹಿತ್ಯ, ಕನ್ನಡ ಶಾಲೆಗಳ ಅಳಿವು-ಉಳಿವು ಹೀಗೆ ಒಟ್ಟಾರೆ 20 ವಿಷಯಗಳ ಕುರಿತು ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆಗಳಲ್ಲಿ ನಡೆಯಲಿವೆ. ಕಳೆದ ಬಾರಿಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ವಿಷಯ ತಜ್ಞರನ್ನು ಹೊರತಾಗಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

ಸಮ್ಮೇಳನ ಸಂಬಂಧ ಅಡುಗೆ ಸಮಿತಿ, ಮಳಿಗೆಗಳ ಸಮಿತಿ, ಉಸ್ತುವಾರಿ ಸಮಿತಿ, ವೇದಿಕೆಗಳ ಸಮಿತಿ ಹೀಗೆ ನಾನಾ ಕೆಲಸ ಕಾರ್ಯಗಳಿಗಾಗಿ 16 ಸಮಿತಿಗಳನ್ನು ಮಾಡಲಾಗಿದೆ. ಮೂರು ಬಾರಿ ಸಮಿತಿ ಸಭೆಗಳನ್ನು ನಡೆಸಲಾಗಿದೆ. ಸ್ಥಳ ಪರಿಶೀಲನೆಯೂ ಪೂರ್ಣಗೊಂಡಿದೆ. ಮೂರು ಬೃಹತ್ ವೇದಿಕೆಗಳು ಸಮ್ಮೇಳನಕ್ಕಾಗಿ ನಿರ್ಮಾಣವಾಗಲಿದ್ದು, ಇವುಗಳ ಬಗ್ಗೆ ಪರಿಶೀಲನೆ ಸೇರಿದಂತೆ ನಾನಾ ಸಿದ್ಧತೆಗಳು ನಡೆದಿವೆ ಎಂದು ಡಾ. ಮನು ಬಳಿಗಾರ್ ತಿಳಿಸಿದರು.

1 ಲಕ್ಷಕ್ಕೂ ಅಧಿಕ ಜನರ ಆಗಮನ: ಕಳೆದ ಬಾರಿ ಮೈಸೂರಿನಲ್ಲಿ ನಡೆದ ಸಮ್ಮೇಳನಕ್ಕೆ ಸುಮಾರು ಒಂದೂವರೆ ಲಕ್ಷ ಮಂದಿ ಆಗಮಿಸಿದ್ದರು. ಈ ಬಾರಿಯೂ ಒಂದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

500 ಮಳಿಗೆಗಳು: ಸಮ್ಮೇಳನದಲ್ಲಿ 350 ಪುಸ್ತಕ ಮಳಿಗೆಗಳು, 150 ವಾಣಿಜ್ಯ ಮಳಿಗೆಗಳು ಸೇರಿದಂತೆ 500 ಮಳಿಗೆಗಳಿಗೆ ಅವಕಾಶ ನೀಡಲಾಗುವುದು. ಇದಲ್ಲದೆ ಇತರೆ ಮಳಿಗೆಗಳೂ ಇರಲಿವೆ ಎಂದು ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ, ಪರಿಷತ್‌ನ ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ ಮತ್ತಿತರರು ಉಪಸ್ಥಿತರಿದ್ದರು.

ಊಟಕ್ಕಾಗಿ ಸಮಯ ನಿಗದಿ

ಸಮ್ಮೇಳನದಲ್ಲಿ ಈ ಬಾರಿ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಶೇಂಗಾ ಹೋಳಿಗೆ ಸೇರಿದಂತೆ ಬಗೆ ಬಗೆಯ ಖಾದ್ಯಗಳಿರಲಿವೆ. ಬೆಳಗ್ಗೆ 8 ರಿಂದ 11ರವರೆಗೆ ತಿಂಡಿ, ಮಧ್ಯಾಹ್ನ 12 ರಿಂದ 3ರವರೆಗೆ, ರಾತ್ರಿ 7.30 ರಿಂದ 10.30ರವರೆಗೆ ಊಟಕ್ಕೆ ಸಮಯ ನಿಗದಿಪಡಿಸಲಾಗುವುದು ಎಂದು ಡಾ. ಲಿಂಗರಾಜ ಅಂಗಡಿ ಮಾಹಿತಿ ನೀಡಿದರು.

12 ಕೋಟಿ ಖರ್ಚು

ಕಳೆದ ಬಾರಿ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಎಂಟು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು. ಆದರೆ, ಈ ಬಾರಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಖರ್ಚು ಹೆಚ್ಚಾಗಿದೆ. ಈ ಸಮ್ಮೇಳನಕ್ಕೆ 10-12 ಕೋಟಿ ಅನುದಾನ ಬೇಕಾಗಿದೆ. ಈ ಸಂಬಂಧ ಸರಕಾರಕ್ಕೆ ಮನವಿ ಸಲ್ಲಿಸಿ, ಪತ್ರ ಬರೆಯಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News