ದಾವಣಗೆರೆ ಮನಪಾದಿಂದ 'ಆಪರೇಶನ್ ವರಾಹ': 300ಕ್ಕೂ ಹೆಚ್ಚು ಹಂದಿಗಳ ಸ್ಥಳಾಂತರ
Update: 2018-10-30 22:32 IST
ದಾವಣಗೆರೆ,ಅ.30: ಮಹಾನಗರ ಪಾಲಿಕೆ ಮತ್ತೆ ವರಾಹ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದು, ಮಂಗಳವಾರ ಸುಮಾರು 310ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ನಗರದಿಂದ ಹೊರಕ್ಕೆ ಸಾಗಿಸಲಾಯಿತು.
ಹಂದಿ ಹಿಡಿಯಲು ತಮಿಳು ನಾಡಿನಿಂದ ನಗರಕ್ಕೆ ಆಗಮಿಸಿದವರು ಪೊಲೀಸರ ಸರ್ಪಗಾವಲಿನಲ್ಲಿ ಕಾರ್ಯಾಚರಣೆಗೆ ಇಳಿದು, ಯಲ್ಲಮ್ಮ ನಗರದ ಸಪ್ತಗಿರಿ ಶಾಲೆ, ಪೊಲೀಸ್ ಕ್ವಾಟ್ರರ್ಸ್, ನಿಜಲಿಂಗಪ್ಪ ಬಡಾವಣೆ, ಬಕ್ಕೇಶ್ವರ ದೇವಸ್ಥಾನ, ಸಿಜಿ ಆಸ್ಪತ್ರೆ, ಐಟಿಐ ಕಾಲೇಜ್, ಮಾಗನೂರು ಬಸಪ್ಪ ಶಾಲೆ ಸೇರಿದಂತೆ ಇತರೆಡೆ 310 ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸಾಗಿಸಿದರು.
ಕಾರ್ಯಾಚರಣೆಯ ಬಳಿಕ ಮಾತನಾಡಿದ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿ ಡಾ.ಚಂದ್ರಶೇಖರ್ ಸುಂಖದ್, ವರಾಹ ಆಪರೇಷನ್ ಹೆಸರಿನಲ್ಲಿ ಹಂದಿ ಹಿಡಿಯಲಿಕ್ಕಾಗಿ ತಮಿಳುನಾಡಿನಿಂದ 25 ಜನರು ಬಂದಿದ್ದು, 2 ನೇ ದಿನದಲ್ಲಿ 310 ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ ಎಂದರು.