ಬೆಳಗಾವಿಯಲ್ಲಿ ಎಂಇಎಸ್ಯಿಂದ ಕರಾಳ ದಿನಾಚರಣೆ
ಬೆಳಗಾವಿ, ನ.1: ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರದಲ್ಲಿ ತೊಡಗಿದ್ದರೆ, ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಕರಾಳಿ ದಿನ ಆಚರಿಸಿ, ರ್ಯಾಲಿ ನಡೆಸಿದರು. ಈ ವೇಳೆ ಕನ್ನಡ ಧ್ವಜ ಹಿಡಿದುಕೊಂಡಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲು ಮುಂದಾದಾಗ ಪೊಲೀಸ್ ಲಾಠಿ ಪ್ರವಾಹ ನಡೆಸಿದರು.
ನಗರದ ಶಿವಾಜಿ ವೃತ್ತದಲ್ಲಿ ಎಂಇಎಸ್ನ ಸಾವಿರಾರು ಕಾರ್ಯಕರ್ತರು ಕಪ್ಪು ಅಂಗಿ ಧರಿಸಿ, ರ್ಯಾಲಿಯಲ್ಲಿ ಭಾಗವಹಿಸಿದ್ದರು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು, ಕನ್ನಡ ರಾಜ್ಯೋತ್ಸವಕ್ಕೆ ಧಿಕ್ಕಾರ ಸೇರಿದಂತೆ ಕನ್ನಡ ವಿರೋಧಿ ಘೋಷಣೆಗಳನು್ನ ಕೂಗುತ್ತಾ ರ್ಯಾಲಿಯಲ್ಲಿ ಸಾಗಿದರು.
ಈ ವೇಳೆ ರ್ಯಾಲಿಯಲ್ಲಿ ಭಾಗವಹಿಸಿದ್ದ ಕೆಲ ಎಂಇಎಸ್ ಕಾರ್ಯಕರ್ತರು ಏಕಾಏಕಿ ಕಲ್ಲುತೂರಾಟ ನಡೆಸಿ ಗಲಭೆ ನಡೆಸಲು ಮುಂದಾದರು. ಪೊಲೀಸರು ಮಧ್ಯೆ ಪ್ರವೇಶಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಆದರೂ ಕಲ್ಲು ತೂರಾಟ ನಿಲ್ಲದಿದ್ದಾಗ, ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ರ್ಯಾಲಿಯಲ್ಲಿ ಬೆಳಗಾವಿ ಉಪ ಮೇಯರ್ ಮಧುಶ್ರೀ ಪೂಜಾರಿ ಉಪಸ್ಥಿತರಿದ್ದರು.