ಕ್ರೀಡಾಕೂಟಗಳಿಂದ ಸ್ಥಳೀಯ ಪ್ರತಿಭೆಗಳ ಅನಾವರಣ ಸಾಧ್ಯ: ಸಚಿವ ಜಾರ್ಜ್

Update: 2018-11-02 13:47 GMT

ಚಿಕ್ಕಮಗಳೂರು, ನ.2: ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಕ್ರೀಡೆ ಸಹಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟಗಳ ಆಯೋಜನೆಯಿಂದ ಸ್ಥಳೀಯರಲ್ಲಿ ಕ್ರೀಡಾಸಕ್ತಿ ಬೆಳೆಯಲು ಸಾಧ್ಯ. ಕ್ರೀಡಾ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಪ್ರೋತ್ಸಾಹ ನೀಡಿದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಸಾಧ್ಯ ಎಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆ, ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಬೋಧಕೇತರ ನೌಕರರ ಸಂಘದ ವತಿಯಿಂದ ಶುಕ್ರವಾರ ನಗರದ ಟಿ.ಎಂ.ಎಸ್ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಡ್ಮಿಂಟನ್ ಪಂದ್ಯಾವಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಈ ಕ್ರೀಡೆ ಹೆಚ್ಚು ಜನಪ್ರಿಯತೆಗಳಿಸಿದ್ದು, ಈ ಕ್ರೀಡೆಯಲ್ಲಿ ದೇಶಕ್ಕೆ ಕೀರ್ತಿ ತಂದಿರುವ ಸಾಕಷ್ಟು ಕ್ರೀಡಾಳುಗಳಿದ್ದಾರೆಂದ ಅವರು, ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಅವರು ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿದ್ದರು. ಇದರಿಂದಾಗಿ ಅವರ ದೇಹದ ಆರೋಗ್ಯ ಸ್ಥಿರವಾಗಿತ್ತು. ಸದಾ ಯುವಕರಂತೆ ಚಟುವಟಿಕೆಯಿಂದ ಇದ್ದರು. ಈ ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬೆಳೆವಣಿಗೆಗೆ ಸಹಕಾರಿ ಆಗಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯ ಜನತೆ ಕ್ರೀಡೆಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ. ಕ್ರೀಡೆಯಲ್ಲಿ ಗೆಲುವು ಸೋಲು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಭಾಗವಹಿಸುವುದು ಮುಖ್ಯ. ಇದೇ ಸಾಧನೆಯ ಅಡಿಗಲ್ಲು ಎಂದ ಅವರು, ಸ್ಪರ್ಧಿಗಳು ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸಿ ರಾಷ್ಟ್ರಮಟ್ಟಕ್ಕೆ ಹೆಚ್ಚಿನ ಸ್ಫರ್ಧಿಗಳು ಆಯ್ಕೆಯಾಗಲಿ ಎಂದು ಶುಭಕೋರಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಧರ್ಮೇಗೌಡ ಮಾತನಾಡಿ, ದೇಶದ ಜನಸಂಖ್ಯೆಗೆ ಹೋಲಿಕೆ ಮಾಡಿದರೇ ರಾಷ್ಟ್ರಮಟ್ಟ ಪ್ರತಿನಿಧಿಸುವ ಕ್ರೀಡಾಪಟುಗಳ ಸಂಖ್ಯೆ ಕಡಿಮೆ ಇದೆ. ಇದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರೀಡೆಗಳಿಗೆ ಪ್ರೋತ್ಸಹ ನೀಡುತ್ತಿದೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಯಾರು ಬೇಕಾದರೂ ತೊಡಗಿಸಿಕೊಳ್ಳಬಹುದು. ಶಾಲಾ ಮಕ್ಕಳಿಗೆ ಸ್ಥಳೀಯವಾಗಿ ಕ್ರೀಡಾಂಗಣದಂತಹ ಮೂಲಸೌಕರ್ಯ ಒದಗಿಸಿದಲ್ಲಿ ಗ್ರಾಮೀಣ ಕ್ರೀಡಾ ಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧ್ಯ ಎಂದರು.

ಶಾಸಕ ಸಿ.ಟಿ.ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ಮತ್ತು ದೇಹದ ಆರೋಗ್ಯಕ್ಕೆ ಕ್ರೀಡೆ ಅತೀಮುಖ್ಯ. ಗೆಲುವಿನ ಹಂಬಲವನ್ನು ಕ್ರೀಡೆ ಮೂಡಿಸುತ್ತದೆ. ಏಷ್ಯನ್ ಗೇಮ್ಸ್, ಒಲಂಪಿಕ್‍ನಲ್ಲಿ ದೇಶದ ಸಾಧನೆ ಕಡಿಮೆ ಇದೆ ಎಂಬ ಕೊರಗು ಇದೆ. ದೇಶದ ದಾಖಲೆ ಅಳಿಸಿ ಏಷ್ಯನ್ ಗೇಮ್ಸ್ ನಲ್ಲಿ ಸ್ಫರ್ಧಿಗಳು ಪದಕ ಗೆದ್ದಿದ್ದಾರೆ. ಕ್ರೀಡೆಯಲ್ಲಿ ದೇಶ ಮುಂದೆ ಸಾಗುತ್ತಿದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿರುವ ಆಸಕ್ತಿ ಗುರುತಿಸಿ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಜಯಣ್ಣ ನೆಟ್ಟೇಕೆರೆಹಳ್ಳಿ, ಟೌನ್ ಮಹಿಳಾ ಸಮಾಜ ವಿದ್ಯಾಸಂಸ್ಥೆ ಅಧ್ಯಕ್ಷೆ ನಳಿನಿ ಡಿಸಾ, ಜಿಲ್ಲಾದಿಕಾರಿ ಎಂ.ಕೆ. ಶ್ರೀರಂಗಯ್ಯ, ಗುರುಪ್ರಸಾಧ್, ಶಿವಸ್ವಾಮಿ ಇದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಎಸ್. ದೇವರಾಜ್ ಸ್ವಾಗತಿಸಿದರು. ಉಪನ್ಯಾಸಕ ಡಾ. ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.

ಆರೋಗ್ಯಕರ ಕಲಿಕೆಗೆ ಕ್ರೀಡೆ ಸಹಕಾರಿ. ಕ್ರೀಡೆಯಲ್ಲಿ ಪ್ರಗತಿ ಸಾಧಿಸಲು ಪೋಷಕರ ಸಹಕಾರ ಅಗತ್ಯ. ಪೋಷಕರು ಮತ್ತು ಶಿಕ್ಷಕರು ವಿಧ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ತಾನು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾದ ನಂತರ  ಶಿಕ್ಷಕರ ಅನೇಕ ಸಮಸ್ಯೆಗಳನ್ನು ಬಗೆಹರಿಸು ಕೆಲಸ ಮಾಡಿದ್ದೇನೆ. 15 ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದ ವೇತನ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. ಕಾಲ್ಪನಿಕ ವೇತನ ಮಂಜೂರು, ಬಡ್ತಿ ಸಮಸ್ಯೆ ಮುಂದಿನ ಡಿಸೆಂಬರ್ ಒಳಗೆ ಬಗೆಹರಿಯಲಿದೆ.
- ಎಸ್.ಎಲ್.ಭೋಜೇಗೌಡ, ವಿಧಾನ ಪರಿಷತ್ ಸದಸ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News