ಕನ್ನಡ ಭಾಷೆ ಉತ್ತರ ಕನಾಟಕದಲ್ಲಿ ಮಾತ್ರ ಉಳಿದಿದೆ: ಜಗದೀಶ್ ಶೆಟ್ಟರ್

Update: 2018-11-05 17:26 GMT

ಮುಂಡಗೋಡ,ನ.5: ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು. ಕನ್ನಡ ಭಾಷೆಗೇ ಪ್ರಾಮುಖ್ಯತೆ ನೀಡಬೇಕು ಮತ್ತು ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವ ಬಗ್ಗೆ ಕನ್ನಡಿಗರಿಗೆ ಹೇಳುವ ಸಂದರ್ಭ ಬಂದೊದಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.  

ಪಟ್ಟಣದ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ರವಿವಾರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜರುಗಿದ ನಗೆ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಎಲ್ಲರೂ ಇಂಗ್ಲೀಷ್ ಭಾಷೆಗೆ ಮಾರು ಹೋಗುತ್ತಿದ್ದಾರೆ. ಇಂಗ್ಲೀಷ್ ಕಲಿತರೆ ಮಾತ್ರ ನಾವು ಜೀವನದಲ್ಲಿ ಉದ್ಧಾರ ಆಗುತ್ತೇವೆ ಎಂಬ ಭಾವನೆ ಹೊಂದಿದ್ದಾರೆ. ಈ ಕೀಳರಿಮೆಯನ್ನು ಕಿತ್ತು ಹಾಕಬೇಕು. ನಮ್ಮ ಮಾತೃ ಭಾಷೆಯನ್ನು ಗೌರವಿಸಬೇಕು. ಕನ್ನಡ ಭಾಷೆ ಉತ್ತರ ಕನಾಟಕದಲ್ಲಿ ಮಾತ್ರ ಉಳಿದಿದೆ. ನಮ್ಮ ಭಾಷೆಯ ಬಗ್ಗೆ ಅಭಿಮಾನ ಮತ್ತು ಸಂಸೃತಿಯನ್ನು ಉಳಿಸಿಕೊಂಡು ಬಂದಿದೆ. ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾನು ಕೂಡ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಮುಗಿಸಿದ್ದೇನೆ ಎಂದು ಹೇಳಿದ ಅವರು, ಮಾಜಿ ಶಾಸಕ ವಿ.ಎಸ್.ಪಾಟೀಲ್ ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದರು ಎಂದರು.

ಮಾಜಿ ಶಾಸಕ ವಿ.ಎಸ್.ಪಾಟೀಲ್ ಮಾತನಾಡಿ ನಮ್ಮ ಭಾಷೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಕರವೇ ತಾಲೂಕಾಧ್ಯಕ್ಷ ಅರುಣ ಭಜಂತ್ರಿ, ಸುರೇಶ ಗೋಕಾಕ, ಉದ್ದಿಮೆದಾರರಾದ ಎಮ್.ಎನ್.ಧುಂಡಶಿ, ಜಗದೀಶ್ ಕುರುಬರ, ಸಹದೇವ ನಡಿಗೇರ, ಕೃಷ್ಣಾ ಹಿರೇಹಳ್ಳಿ, ಪ.ಪಂ. ಸದಸ್ಯ ಫಣಿರಾಜ ಹದಳಗಿ, ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಶಿಕ್ಷಕ ಎಸ್.ಡಿ.ಮುಡೆಣ್ಣವರ, ರವಿ ಭಜಂತ್ರಿ, ಸುರೇಶ ಕೋರಿ, ಸ್ವಾತಂತ್ರ್ಯ ಯೋಧ ಪರಶುರಾಮ ಚಂದಾಪುರ, ಬಾಪುಗೌಡ ಪಾಟೀಲ, ರಾಧಾಬಾಯಿ ಶಿರಾಲಿ, ಫಕ್ಕೀರಪ್ಪ ಭಜಂತ್ರಿ ಇದ್ದರು. ಮಂಜುನಾಥ ನಡಿಗೇರ ಸ್ವಾಗತಿಸಿದರು. ನರೇಂದ್ರ ತಳೇಕರ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ಶೇಟ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಮಜಾಭಾರತ ತಂಡದ ನಗೆ ಸಂಜೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News