×
Ad

ರೈತರಿಗೆ ನೊಟೀಸ್: ಮಡಿಕೇರಿಯಲ್ಲಿ ರೈತ ಸಂಘದಿಂದ ಪ್ರತಿಭಟನೆ

Update: 2018-11-05 23:09 IST

ಮಡಿಕೇರಿ, ನ.5: ಸರಕಾರದ ಆದೇಶವನ್ನು ಮೀರಿ ಬೆಳೆಗಾವಿಯ ರೈತರಿಗೆ ಸಾಲ ವಸೂಲಿಯ ನೊಟೀಸ್ ನೀಡಿ ಬಂಧನ ಮಾಡಿಸಲು ಒತ್ತಡ ಹೇರಿರುವ ಕೋಲ್ಕತ್ತ ಆಕ್ಸಿಸ್ ಬ್ಯಾಂಕ್‍ನ ಕ್ರಮವನ್ನು ಖಂಡಿಸಿ ಕೊಡಗು ರೈತ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರದ ಆಕ್ಸಿಸ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ ರೈತ ಸಂಘದ ಸದಸ್ಯರು ಆಕ್ಸಿಸ್ ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ರೈತರ ನೆರವಿಗೆ ಬಾರದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು. ರೈತರನ್ನು ಸಾಲ ಕಟ್ಟುವಂತೆ ಪೀಡಿಸುತ್ತಿರುವ ಆಕ್ಸಿಸ್ ಬ್ಯಾಂಕನ್ನು ರಾಜ್ಯದಿಂದಲೇ ಕಿತ್ತೊಗೆಯಬೇಕು. ಬ್ಯಾಂಕ್‍ನ ಮ್ಯಾನೇಜರ್ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಪ್ರತಿಭಟನಾಕಾರರು ಆಕ್ರೋಶ ಹೊರಗೆಡವಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಮುಂದಾಗದ ಕ್ರಮಕ್ಕೆ ರೈತ ಸಂಘದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ ಯಾವುದೇ ರೈತ ಆತ್ಮಹತ್ಯೆಗೆ ಶರಣಾದರೆ ಆಕ್ಸಿಸ್ ಬ್ಯಾಂಕ್ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರತಿಭಟನಾಕಾರರು ಬ್ಯಾಂಕ್‍ನ್ನು ಬಂದ್ ಮಾಡುವಂತೆ ಪಟ್ಟು ಹಿಡಿದರು. 

ಮಡಿಕೇರಿ ಆಕ್ಸಿಸ್ ಬ್ಯಾಂಕ್‍ನ ಮ್ಯಾನೇಜರ್ ಮಾತನಾಡಿ, ಪ್ರತಿಭಟನೆಯ ಮನವಿ ಪತ್ರವನ್ನು ಕೋಲ್ಕತ್ತ ಕೇಂದ್ರ ಕಚೇರಿಗೆ ಕಳುಹಿಸಿ ನೋಟಿಸ್ ಹಿಂಪಡೆಯುವಂತೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಈ ಸಂದರ್ಭ ರೈತ ಸಂಘದ ಕಾನೂನು ಸಲಹೆಗಾರರಾದ ವಕೀಲ ಹೇಮಚಂದ್ರ, ಪ್ರಮುಖರಾದ ಚಿಮ್ಮಣಮಾಡ ಗಣೇಶ್, ಸುಜಯ್ ಬೋಪಯ್ಯ, ಹರಿ ಸೋಮಯ್ಯ ರಾಜಪ್ಪ, ಅರ್ಜುನ, ಮಹೇಶ್, ಸುಭಾಷ್ ಮತ್ತಿತ್ತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News