ಟಿಪ್ಪುವನ್ನು ಹಿಡಿದುಕೊಂಡವರೆಲ್ಲಾ ಹಾಳಾಗಿ ಹೋಗಿದ್ದಾರೆ: ಕೆ.ಎಸ್ ಈಶ್ವರಪ್ಪ

Update: 2018-11-07 14:39 GMT

ಹಾಸನ,ನ.7: ಟಿಪ್ಪುವನ್ನು ಹಿಡಿದುಕೊಂಡವರೆಲ್ಲಾ ಈಗಾಗಲೇ ಹಾಳಾಗಿ ಹೋಗಿದ್ದು, ಇದೀಗ ಅದನ್ನೇ ಮುಂದುವರೆಸಲು ಹೊರಟಿರುವ ಸಿಎಂ ಕುಮಾರಸ್ವಾಮಿಯ ಸರದಿ ಎಂದು ಟಿಪ್ಪು ಜಯಂತಿ ವಿರುದ್ಧ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಅದಿ ದೇವತೆ ಹಾಸನಾಂಬೆ ದೇವಿ ದರ್ಶನವನ್ನು ಕುಟುಂಬ ಸಮೇತ ಪಡೆದು ಹೊರಗೆ ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪುವನ್ನು ಹಿಡಿದುಕೊಂಡವರಲ್ಲಾ ಹಾಳಾಗಿ ಹೋಗಿದ್ದಾರೆ. ಟಿಪ್ಪು ಜಯಂತಿಗೆ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯ ಅವರ ಕಥೆ ಏನಾಯಿತು. ಮಲ್ಯ ಅವರ ಗತಿ ಏನಾಯಿತು. ಎಲ್ಲವೂ ಗೊತ್ತಿರುವ ವಿಚಾರ. ಈಗ ಕುಮಾರಸ್ವಾಮಿಯ ಸರದಿ ಎಂದು ವ್ಯಂಗ್ಯವಾಡಿದರು.

ಟಿಪ್ಪು ಜಯಂತಿಯನ್ನು ಸರ್ಕಾರ ಏಕೆ ಪ್ರತಿಷ್ಠೆಯಾಗಿ ಪರಿಗಣಿಸಿದೆಯೋ ತಿಳಿಯದಾಗಿದೆ. ಟಿಪ್ಪು ಸುಲ್ತಾನ್‍ಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏನು ಸಂಬಂಧ ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಟಿಪ್ಪು ಜಯಂತಿ ಶುರುವಾಯಿತು. ಇದರಿಂದ ಸುಮಾರು 21 ಹಿಂದೂ ಯುವಕರ ಕಗ್ಗೊಲೆಯಾಯ್ತು. ಟಿಪ್ಪು ಜಯಂತಿಯಿಂದ ರಾಜ್ಯದಲ್ಲಿ ಶಾಂತಿ ಕದಡುತ್ತದೆ ಎಂದು ಗೊತ್ತಿದ್ದರೂ ಸರ್ಕಾರ ಮತ್ತೆ ಜಯಂತಿ ಆಚರಣೆ ಮುಂದಾಗಿರುವುದು ಸರಿಯೇ ಎಂದು ಪ್ರಶ್ನಿಸಿದರು. ಟಿಪ್ಪು ಜಯಂತಿಯನ್ನು ವಿರೋಧಿಸಿದ ಕುಮಾರಸ್ವಾಮಿ ಅವರೇ ಮತ್ತೆ ಜಯಂತಿ ಆಚರಣೆ ಮುಂದಾಗಿದ್ದಾರೆ ಎಂದ ಅವರು, ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ರಾಜ್ಯದಲ್ಲಿ ಶಾಂತಿ ಕಾಪಾಡಲು ಟಿಪ್ಪು ಜಯಂತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಓಟು ಹಾಕುತ್ತಾರೆ ಎಂಬ ಕಾರಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಜಾತಿ ಧರ್ಮದ ಹೆಸರಿನಲ್ಲಿ ಕೀಳುಮಟ್ಟದ ರಾಜಕೀಯಕ್ಕೆ ಮುಂದಾಗಿದೆ. ಇವರಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ ಅವರು, ಜರ್ನಾದನ ರೆಡ್ಡಿ ಬಂಧನ ಭೀತಿ ವಿಚಾರ ಅವರ ವೈಯಕ್ತಿಕ ಎಂದರು. 

ಎಲ್ಲಾ ಚುನಾಣೆಯಲ್ಲೂ ಜನರು ಒಂದೇ ರೀತಿ ಇರುವುದಿಲ್ಲ. ಅದೇ ರೀತಿ ಉಪ ಚುನಾವಣೆಯಲ್ಲಿ ಫಲಿತಾಂಶ ಬಂದಿದೆ. ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಈಗ ಮಾಜಿ ಆಗಿಲ್ಲವೇ ? ನಾವು 104 ಸ್ಥಾನಗಳಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಬದಲಾವಣೆಗಳಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್-ಜೆಡಿಎಸ್ ಮುಳುಗುವ ವೇಳೆಯಲ್ಲಿ ಒಂದಾಗಿದ್ದಾರೆ. ಹುಚ್ಚು ನಾಯಿಯಂತೆ ಕಿತ್ತಾಡುತ್ತಿದ್ದವರು ಅಧಿಕಾರಕ್ಕಾಗಿ ಒಂದಾಗಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದರು.

ರೈತರ ಸಾಲಮನ್ನಾ ಮಾಡಿದ್ದೇನೆ ಎಂದು ಸಿಎಂ ಹೇಳುತ್ತಾರೆ. ಆದರೆ ರೈತರಿಗೆ ಯಾಕೆ ಬಂಧನ ವಾರೆಂಟ್ ಬರುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಸಿಎಂ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಕುತಂತ್ರದಿಂದ ರಾಮನಗರದಲ್ಲಿ ನಮ್ಮ ಅಭ್ಯರ್ಥಿ ಪಕ್ಷ ಬಿಟ್ಟಿದ್ದಾರೆ ಎಂದ ಅವರು, ಇದು ಅವರಿಗೆ ಸಿಕ್ಕ ತಾತ್ಕಾಲಿಕ ಗೆಲುವು ಎಂದು ತಿಳಿಸಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 24 ಸ್ಥಾನ ಬರುವುದು ನಿಶ್ಚಿತ. ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಪುನೀತ್, ದಯಾನಂದ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News