ಶಾಂತಿಯುತ ಟಿಪ್ಪು ಜಯಂತಿ ಆಚರಣೆಗೆ ಕೊಡಗು ಎಸ್ಪಿ ಸುಮನ್ ಪನ್ನೇಕರ್ ಮನವಿ

Update: 2018-11-08 17:26 GMT

ಮಡಿಕೇರಿ, ನ.8: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ತಾಲೂಕು ಕೇಂದ್ರಗಳಾದ ವೀರಾಜಪೇಟೆ ಮತ್ತು ಸೋಮವಾರಪೇಟೆಗಳಲ್ಲಿ ನ.10 ರಂದು ನಡೆಯಲಿರುವ ‘ಟಿಪ್ಪು ಜಯಂತಿ'ಗೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಬಾರದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಮನವಿ ಮಾಡಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂದರ್ಭದ ದುರ್ಲಾಭ ಪಡೆದು ಶಾಂತಿ ಕದಡುವ ಪ್ರಯತ್ನಗಳಿಗೆ ಮುಂದಾಗುವ ಯಾವುದೇ ಪ್ರಯತ್ನಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಅಂತಹವರನ್ನು ಬಂಧಿಸಲಿದೆಯೆಂದು ಎಚ್ಚರಿಕೆ ನೀಡಿದರು.

ಸಿಸಿ ಕ್ಯಾಮೆರಾಗಳ ಹದ್ದು ಗಣ್ಣು: ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ತಾತ್ಕಾಲಿಕವಾದ 200 ಸಿಸಿ ಟಿವಿಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದು ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆಯೆಂದು ಮಾಹಿತಿ ನೀಡಿದರು.

10 ಕಡೆ ಚೆಕ್ ಪೋಸ್ಟ್
ಜಿಲ್ಲೆಯ ಅಂಚಿನಲ್ಲಿರುವ ಕೇರಳ, ವಯನಾಡು, ಕಾಸರಗೋಡು ಹಾಗೂ ಹಾಸನ ಜಿಲ್ಲೆ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತೆ 10 ಕಡೆಗಳಲ್ಲಿ ಚೆಕ್ ಪೋಸ್ಟ್‍ಗಳನ್ನು ಮಾಡಲಾಗಿದ್ದು, ಇವುಗಳ ಮೂಲಕ ಹೊರ ಜಿಲ್ಲೆಯಿಂದ ಬರುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುವ ‘ನಾಕಾಬಂದಿ’ ಕಾರ್ಯವನ್ನು ಮಾಡಲಾಗುತ್ತಿದೆ. ಆ ಮೂಲಕ ಕಿಡಿಗೇಡಿಗಳು ಜಿಲ್ಲೆಗೆ ಬಂದು ದುಷ್ಕೃತ್ಯಗಳನ್ನು ನಡೆಸಲು ಮುಂದಾಗದಂತೆ ನಿಗಾವಹಿಸಲಾಗಿದೆ. ಈ ಚೆಕ್ ಪೋಸ್ಟ್‍ಗಳಲ್ಲಿ ತಲಾ 4 ರಂತೆ ಒಟ್ಟು 40 ಸಿಸಿ ಟಿವಿಗಳನ್ನು ಅಳವಡಿಸಲಾಗಿದೆಯೆಂದು ತಿಳಿಸಿದರು.

ಇದರೊಂದಿಗೆ ಜಿಲ್ಲೆಯ ಒಳಭಾಗದಲ್ಲಿ 40 ಚೆಕ್ ಪೋಸ್ಟ್‍ಗಳನ್ನು ಅಳವಡಿಸುವ ಮೂಲಕ ಕಿಡಿಗೇಡಿ ಕೃತ್ಯಗಳಿಗೆ ಕಡಿವಾಣ ಹಾಕುವ ಪ್ರಯತ್ನ ಇಂದು ಬೆಳಗ್ಗಿನಿಂದ ಆರಂಭವಾಗಿದೆಯೆಂದು ವಿವರಗಳನ್ನಿತ್ತರು.

ಇಪ್ಪತ್ತನಾಲ್ಕು ಗಂಟೆ ಗಸ್ತು: ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದ ರೀತಿಯಲ್ಲಿ 75 ಪೆಟ್ರೋಲಿಂಗ್ ವಾಹನಗಳ ಮೂಲಕ ದಿನದ ಇಪ್ಪತ್ತನಾಲ್ಕು ಗಂಟೆ ಗಸ್ತು ವ್ಯವಸ್ಥೆಯನ್ನು ಈಗಾಗಲೆ ಏರ್ಪಡಿಸಲಾಗಿದೆ. ಇದರೊಂದಿಗೆ ಟಿಪ್ಪು ಜಯಂತಿಯ ಸಂದರ್ಭ ಮರಗಳನ್ನು ಕಡಿದು ಹಾಕುವ ಪ್ರಕರಣಗಳನ್ನು ಎದುರಿಸಲು ಅರಣ್ಯ ಇಲಾಖೆಯ ಸಹಕಾರದೊಂದಿಗೆ 7 ರ್ಯಾಪಿಡ್ ರೆಸ್ಪಾನ್ಸ್ ತಂಡವನ್ನು ನಿಯೋಜಿಸಲಾಗಿದೆಯೆಂದು ಡಾ.ಸುಮನ್ ಪನ್ನೇಕರ್ ಮಾಹಿತಿಯನ್ನಿತ್ತರು.

2 ಸಾವಿರ ಸಿಬ್ಬಂದಿಗಳ ನಿಯುಕ್ತಿ
ಟಿಪ್ಪು ಜಯಂತಿಯ ಬಂದೋಬಸ್ತ್ ಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ 1500 ರಿಂದ 2 ಸಾವಿರ ಪೊಲೀಸ್ ಸಿಬ್ಬಂದಿಗಳು ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಚಾಮರಾಜನಗರದ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ಜಿಲ್ಲೆಗೆ ನಿಯುಕ್ತಿಮಾಡಲಾಗಿದೆ, 6 ಡಿವೈಎಸ್‍ಪಿ, 20 ಪೊಲೀಸ್ ಇನ್ಸ್‍ಪೆಕ್ಟರ್, 46 ಸಬ್ ಇನ್ಸ್ ಪೆಕ್ಟರ್, 104 ಎಎಸ್‍ಐ, 300 ಹೋಂ ಗಾಡ್ರ್ಸ್, 850 ಪೊಲೀಸ್ ಸಿಬ್ಬಂದಿಗಳು, 21 ಡಿಎಆರ್ ತುಕಡಿಗಳು, 10 ಕೆಎಸ್‍ಆರ್‍ಪಿ ತುಕಡಿಗಳನ್ನು ಹಾಗೂ ರ್ಯಾಪಿಡ್ ಆಕ್ಷನ್ ಫೋರ್ಸ್‍ನ್ನು ನಿಯುಕ್ತಿಗೊಳಿಸಲಾಗಿದೆಯೆಂದು ತಿಳಿಸಿದರು.

ಐವರ ವಿರುದ್ಧ ಪ್ರಕರಣ
ಪೊನ್ನಂಪೇಟೆಯಲ್ಲಿ ನ.5 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಕೋಮು ಪ್ರಚೋದಕವಾಗಿ ಮಾತನಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿರುವುದಾಗಿ ತಿಳಿಸಿದರು.

ಆಹ್ವಾನ ಪತ್ರಿಕೆ ಇರುವವರಿಗೆ ಮಾತ್ರ ಅವಕಾಶ
ಜಿಲ್ಲೆಯ ಮೂರು ಕಡೆಗಳಲ್ಲಿ ನ.10 ರಂದು ಬೆಳಗ್ಗೆ 9 ಗಂಟೆಗೆ ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿಗಳು ಮತ್ತು ಆಮಂತ್ರಣ ಪತ್ರಿಕೆ ಇರುವವರಿಗೆ ಮಾತ್ರ ಅವಕಾಶವನ್ನು ಒದಗಿಸಲಾಗುತ್ತದೆ ಎಂದು ಎಸ್‍ಪಿ ಡಾ. ಸುಮನ್ ಪನ್ನೇಕರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News