ಸಿದ್ದರಾಮಯ್ಯನವರಿಗೆ ತಲೆ ಕೆಟ್ಟಿದೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಕಲಬುರ್ಗಿ, ನ. 10: ಸಿದ್ದರಾಮಯ್ಯನವರು ಒಂದು ವರ್ಗವನ್ನು ಓಲೈಕೆ ಮಾಡಲು ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿದ್ದು, ಅವರಿಗೆ ತಲೆ ಕೆಟ್ಟಿದೆ. ನಿಜಕ್ಕೂ ಅವರಿಗೆ ಮುಸ್ಲಿಮರ ಬಗ್ಗೆ ಗೌರವವಿದ್ದರೆ ಅಬ್ದುಲ್ ಕಲಾಂ ಜಯಂತಿ ಆಚರಿಸಬೇಕಿತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡಿ ಅಧಿಕಾರ ಕಳೆದುಕೊಂಡರು. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಟಿಪ್ಪು ಜಯಂತಿಯಿಂದ ದೂರ ಉಳಿದಿದ್ದಾರೆಂದು ಟೀಕಿಸಿದರು.
ಆರೋಗ್ಯ ಸಮಸ್ಯೆ ನೆಪವೊಡ್ಡಿ ಟಿಪ್ಪು ಜಯಂತಿಯಿಂದ ಕುಮಾರಸ್ವಾಮಿ ದೂರ ಉಳಿದಿದ್ದು, ಟಿಪ್ಪುಜಯಂತಿ ಆಚರಣೆ ಸಿಎಂಗೆ ಇಷ್ಟವಿರಲಿಲ್ಲ. ಹೀಗಾಗಿಯೇ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕೂ ಹೆಸರು ಹಾಕಬೇಡಿ ಎಂದು ತಾಕೀತು ಮಾಡಿದ್ದು, ಅವರ ಧೈರ್ಯಕ್ಕೆ ಅಭಿನಂದಿಸಲೇಬೇಕು ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಯಾವ ಹುಲಿಯನ್ನಲ್ಲ, ಇಲಿಯನ್ನು ಸಾಯಿಸಲಿಲ್ಲ. ಆತ ಹಿಂದೂ ವಿರೋಧಿ, ಅನೇಕ ಕೊಡವರನ್ನು ಕಗ್ಗೊಲೆ ಮಾಡಿದ್ದಾರೆ. ಇಂತಹ ವ್ಯಕ್ತಿಯ ಜಯಂತಿ ಕೈಬಿಟ್ಟು ದೇಶದಲ್ಲಿನ ಅನೇಕ ಮಹಾತ್ಮರ ಜಯಂತಿಯನ್ನು ಆಚರಿಸಲಿ ಎಂದು ಯತ್ನಾಳ್ ಕೋರಿದರು.
ಎಚ್ಚರಿಕೆಯಿಂದ ಮಾತನಾಡಿ: ‘ಪ್ರಧಾನಿ ಮೋದಿಯರನ್ನ ಜೀವಂತವಾಗಿ ಸುಡುವ ಕಾಲ ಬಂದಿದೆ’ ಎಂಬ ಮಾಜಿ ಸಚಿವ ಜಯಚಂದ್ರ ಹೇಳಿಕೆ ಸರಿಯಲ್ಲ. ಅವರ ನಾಲಿಗೆ ಸುಡಬೇಕಾಗುತ್ತದೆ. ಎಚ್ಚರಿಕೆಯಿಂದ ಭಾಷೆಯ ಮೇಲೆ ಹಿಡಿತವಿಟ್ಟುಕೊಂಡು ಅವರು ಮಾತನಾಡಬೇಕು ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.