ಸ್ವಯಂ ಪ್ರೇರಿತ ಕೊಡಗು ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ
Update: 2018-11-10 14:05 GMT
ಮಡಿಕೇರಿ, ನ.10: ಟಿಪ್ಪು ಜಯಂತಿಯನ್ನು ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದ್ದ ಸ್ವಯಂ ಪ್ರೇರಿತ ಕೊಡಗು ಬಂದ್ 'ರಿಸ್ಕ್' ಬೇಡ ಎನ್ನುವ ಕಾರಣಕ್ಕಾಗಿ ಯಶಸ್ವಿಯಾಯಿತು.
ಜಿಲ್ಲೆಯ ಮೂರು ತಾಲೂಕುಗಳಾದ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ಆಗಮಿಸದ ಕಾರಣ ಶಾಲೆಗಳಲ್ಲಿ ತರಗತಿಗಳು ನಡೆಯಲಿಲ್ಲ. ಎರಡನೇ ಶನಿವಾರ ಸರಕಾರಿ ರಜೆಯಾಗಿರುವುದರಿಂದ ಕಚೇರಿಗಳಿಗೆ ಬಂದ್ ಬಿಸಿ ತಟ್ಟಲಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಬಸ್ಗಳು ಸಂಚರಿಸಲಿಲ್ಲ, ಸರಕಾರಿ ಬಸ್ಗಳು ಕುಶಾಲಗರದವರೆಗೆ ಮಾತ್ರ ಸಂಚರಿಸಿದವು. ಬೆರಳೆಣಿಕೆಯಷ್ಟು ಅಂಗಡಿಗಳು ಮಾತ್ರ ತೆರೆದಿದ್ದವು.
ಆಟೋರಿಕ್ಷಾಗಳು, ಖಾಸಗಿ ವಾಹನಗಳ ಓಡಾಟಕ್ಕೆ ಯಾವುದೇ ಅಡ್ಡಿ, ಆತಂಕಗಳಿರಲಿಲ್ಲ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಪ್ರವಾಸಿಗರಿಗೂ ಬಂದ್ ನ ಬಿಸಿ ತಟ್ಟಿಲ್ಲ.