ಕನಕಪುರ: ಮಾರಕಾಸ್ತ್ರಗಳಿಂದ ಕಡಿದು ಜೆಡಿಎಸ್ ದಲಿತ ಮುಖಂಡನ ಹತ್ಯೆ

Update: 2018-11-12 17:38 GMT

ಕನಕಪುರ, ನ.12: ಜೆಡಿಎಸ್ ರಾಜ್ಯ ಎಸ್ಸಿ-ಎಸ್ಟಿ ಘಟಕದ ಮುಖಂಡರೊಬ್ಬರನ್ನು ಮೂವರು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರ ಗಳಿಂದ ಕಡಿದು ಹತ್ಯೆಗೈದಿರುವ ಘಟನೆ ಕನಕಪುರ ಟೌನ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ 7:15ರ ಸುಮಾರಿಗೆ ನಡೆದಿದೆ.

ತಾಲೂಕಿನ ಕಸ್ಬ ಹೋಬಲಿಯ ಪಿ.ರಾಮಪುರ ನಿವಾಸಿ, ಪ್ರಸಕ್ತ ಕನಕಪುರ ನಗರದಲ್ಲಿ ನಿರ್ವಾಹಣೇಶ್ವರ ಗಿರೀಶ್ ಕಲ್ಯಾಣ ಮಂಟಪದ ಬಳಿ ವಾಸವಿರುವ ಆರ್.ಟಿ.ರಾಜ್‌ಗೋಪಾಲ್(42) ಕೊಲೆಯಾದವರು. ಇವರು ಜೆಡಿಎಸ್ ರಾಜ್ಯ ಎಸ್ಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಸೋಮವಾರ ಸಂಜೆ ಪಟ್ಟಣದ ಹಳೇ ಪೊಲೀಸ್ ಠಾಣಾ ರಸ್ತೆಯಲ್ಲಿರುವ ಹೊಟೇಲ್ ಒಂದರಲ್ಲಿ ತನ್ನ ಸ್ನೇಹಿತರೊಂದಿಗೆ ಚಾ ಕುಡಿಯುತ್ತಿದ್ದಾಗ ಅವರ ಮೊಬೈಲ್‌ಗೆ ಕರೆಯೊಂದು ಬಂದಿದ್ದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಅವರು ಹೊಟೇಲ್‌ನಿಂದ ಹೊರ ಹೋಗಿದ್ದರು ಎನ್ನಲಾಗಿದೆ. ಹೊಟೇಲ್‌ನಿಂದ ಹೊರ ಹೋದ ಅವರು ಜನನಿ ಕ್ಲೀನಿಕ್ ಪಕ್ಕದಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ನಡೆದುಕೊಂಡು ಬಂದ ಮೂವರು ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ದಾಳಿಯಿಂದ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದರು. ಡಿವೈಎಸ್ಪಿ ಮತ್ತು ವೃತ್ತ ನಿರೀಕ್ಷಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಹಿಂದೆ ಬಿಎಸ್ಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಆರ್.ಟಿ.ರಾಜ್‌ಗೋಪಾಲ್ ಎರಡು ವರ್ಷಗಳಿಂದ ಜೆಡಿಎಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ತಂದೆ, ತಾಯಿ, ಪತ್ನಿ, ಸಹೋದರರನ್ನು ಅಗಲಿದ್ದಾರೆ. ಆಸ್ಪತ್ರೆ ಎದುರು ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಹಾಗೂ ದಲಿತ ಮುಖಂಡರು ಕೊಲೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿದರು. ಇದರಿಂದ ಸ್ಥಳದಲ್ಲಿ ಕೆಲವು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ನಗರದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News