ಸಚಿವ ಅನಂತ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಮುರುಘಾ ಶ್ರೀ

Update: 2018-11-12 17:53 GMT
ಫೈಲ್ ಚಿತ್ರ

ಮಡಿಕೇರಿ ನ.12 : ರಾಜಕೀಯ ಮುತ್ಸದಿ, ಸರಳ, ಸಜ್ಜನಿಕೆಯ ಕೇಂದ್ರ ಸಚಿವ ಅನಂತ ಕುಮಾರ್ ನಿಧನಕ್ಕೆ ಚಿತ್ರ ದುರ್ಗ ಬೃಹನ್ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಗಳು, ಅನಂತ ಕುಮಾರ್ ಅವರು ಶ್ರೀ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದ ಅವರು ತಮ್ಮ ಜೀವನದುದ್ದಕ್ಕೂ ಸಮಾಜ ಮುಖಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಾನವ ಬದುಕಿನ ದೊಡ್ಡ ದೌರ್ಬಲ್ಯ ಅಪ್ರಬುದ್ಧತೆ. ಇದು ಎಲ್ಲರ ಬದುಕಿನಲ್ಲಿ ಇರುತ್ತದೆ. ಮಾನವ ಜನಾಂಗದ ದೊಡ್ಡ ಸವಾಲು ಪ್ರಬುದ್ಧತೆ. ಪ್ರಬುದ್ಧ ವ್ಯಕ್ತಿಗಳಲ್ಲಿ ರಾಜ್ಯ ರಾಷ್ಟ್ರವನ್ನು ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯುವ ಪ್ರಯತ್ನ ಇರುತ್ತದೆ. ಈ ನಿಟ್ಟಿನಲ್ಲಿ ಶ್ರೀಯುತ ಅನಂತಕುಮಾರ್ ಅವರು ಯಾವುದೇ ಸಮಸ್ಯೆಗಳನ್ನು ಪ್ರಬುದ್ಧತೆಯಿಂದ ನಿರ್ವಹಿಸುತ್ತಿದ್ದರು ಎಂದರು.

ಅವರು ಸ್ನೇಹಮಯಿ. ಜೀವಪರವಾದ ಕಾಳಜಿಯುಳ್ಳವರು. ಶ್ರೀಯುತರು ಇಂದು ಮುಂಜಾನೆ ನಿಧನರಾಗಿರುವ ಸುದ್ದಿ ಇಡೀ ರಾಜ್ಯ ರಾಷ್ಟ್ರಕ್ಕೆ ನೋಂವುಂಟು ಮಾಡಿದೆ. ಒಬ್ಬ ಮುತ್ಸದ್ಧಿ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ ಹಾಗೂ ಇವರ ನಿಧನದಿಂದ ಉಂಟಾಗಿರುವ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News