ತರೀಕೆರೆ: ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೈದ ಮಹಿಳೆ
ತರೀಕೆರೆ, ನ.13: ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬರು ತನ್ನ ಎರಡು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ತಾಲೂಕಿನ ಹಳಿಯೂರು ಗ್ರಾಮದಲ್ಲಿ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯನ್ನು ಅನು(23) ಹಾಗೂ ಆಕೆಯ ಮಗ ದರ್ಶನ್(2)ಎಂದು ತಿಳಿದು ಬಂದಿದೆ. ಈಕೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದ ಕುಮಾರ್ ಎಂಬಾತನ ಪತ್ನಿಯಾಗಿದ್ದು, ಪತಿಯ ಕಿರುಕುಳದಿಂದಲೇ ಅನು ತನ್ನ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮಹಿಳೆಯ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ಪತಿ ಕುಮಾರ್ ಹಣಕ್ಕಾಗಿ ಪತ್ನಿ ಅನು ಅವರಿಗೆ ಸಾಕಷ್ಟು ಬಾರಿ ಕಿರುಕುಳ ನೀಡುತ್ತಿದ್ದ. ಸೋಮವಾರ ರಾತ್ರಿಯೂ ಕುಮಾರ್ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ಅನು ತನ್ನ ಎರಡು ವರ್ಷದ ಮಗ ದರ್ಶನ್ನೊಂದಿಗೆ ತೋಟದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅನು ಪೋಷಕರು ಆರೋಪಿಸಿದ್ದಾರೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಸಾಲಕ್ಕೆ ಬೇಸತ್ತು ಆತ್ಮಹತ್ಯೆ ಎಂದು ಬಿಂಬಿಸಲು ಪತಿ ಯತ್ನ: ಮಂಗಳವಾರ ಅನು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದ ಕೂಡಲೇ ಪತಿ ಕುಮಾರ್ ಇದನ್ನು ಸಾಲಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಲು ಪ್ರಯತ್ನಿಸಿದ್ದ ಎಂದು ತಿಳಿದು ಬಂದಿದೆ. ಕುಮಾರ್ ತರೀಕೆರೆ ಪಟ್ಟಣದ ವಿಜಯಾ ಬ್ಯಾಂಕ್ನಲ್ಲಿ 50 ಸಾವಿರ ಹೌಸಿಂಗ್ ಲೋನ್ ಮಾಡಿದ್ದ. ಇದನ್ನು ಮರುಪಾವತಿ ಮಾಡದ ಕಾರಣ ಬ್ಯಾಂಕ್ ಕುಮಾರ್ ಗೆ ನೋಟಿಸ್ ನೀಡಿತ್ತು. ಈ ನೋಟಿಸ್ಗೆ ಬೆದರಿದ ಅನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕುಮಾರ್ ಕತೆ ಕಟ್ಟಿದ್ದ ಎನ್ನಲಾಗಿದ್ದು, ಅನು ಸಾವಿಗೆ ಪತಿ ಕುಮಾರ್ ನ ಕಿರುಕುಳವೇ ಕಾರಣ ಎಂದು ಅನು ಪೋಷಕರು ದೂರು ನೀಡಿದ್ದರಿಂದ ಕಿರುಕುಳದಿಂದಲೇ ಅನು ತನ್ನ ಮಗನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಹೇಳಲಾಗುತ್ತಿದೆ.