ನ.17ರಿಂದ ರಾಜ್ಯದಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಪ್ರವಾಸ: ಸಚಿವ ದೇಶಪಾಂಡೆ

Update: 2018-11-14 16:55 GMT

ಬೆಂಗಳೂರು, ನ.14: ಕೇಂದ್ರ ಸರಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತಾಬ್ ಗೌತಮ್ ನೇತೃತ್ವದ ಬರ ಅಧ್ಯಯನ ತಂಡವು ನ.17ರಿಂದ 19ರವರೆಗೆ ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 10 ಸದಸ್ಯರಿರುವ ಈ ತಂಡವು ಮೂರು ಉಪ ತಂಡಗಳಾಗಿ ರಾಜ್ಯದ ನಾನಾ ಭಾಗಗಳಿಗೆ ಭೇಟಿ ನೀಡಲಿವೆ. ಗೌತಮ್ ಅವರ ನೇತೃತ್ವದ ಮೊದಲನೆ ತಂಡವು ನ.17ರಂದು ಯಾದಗಿರಿ, ರಾಯಚೂರು, ನ.18ರಂದು ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಭೇಟಿ ನೀಡಿ, ಬರಪೀಡಿತ ಸ್ಥಳಗಳಿಗೆ ತೆರಳಲಿದೆ ಎಂದರು.

ಇದೇ ರೀತಿ ಡಾ.ಮಹೇಶ್ ನೇತೃತ್ವದ ಎರಡನೆ ತಂಡವು ಈ ಅವಧಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಗದಗ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಹಾಗೆಯೇ, ಮಾನಸ್ ಚೌಧರಿ ನೇತೃತ್ವದ ಮೂರನೆ ತಂಡವು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ತೆರಳಲಿದೆ ಎಂದು ಅವರು ಹೇಳಿದರು.

ಕೇಂದ್ರದ ಈ ಅಂತರ್-ಸಚಿವಾಲಯ ತಂಡವು ತಮ್ಮ ತಮ್ಮ ಜಿಲ್ಲೆಗಳಿಗೆ ಬಂದಾಗ, ಆಯಾ ಭಾಗದ ಜನಪ್ರತಿನಿಧಿಗಳು ಬರ ಮತ್ತು ಅದರಿಂದಾಗಿರುವ ಹಾನಿ/ನಷ್ಟದ ಬಗ್ಗೆ ತಂಡದ ಸದಸ್ಯರಿಗೆ ಸೂಕ್ತ ಮಾಹಿತಿ ನೀಡಬಹುದು ಎಂದು ದೇಶಪಾಂಡೆ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೆ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅಲ್ಲದೆ, ಅಕ್ಟೋಬರ್ 30ರಂದು ತಾವು ಮತ್ತು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ದಿಲ್ಲಿಗೆ ಹೋಗಿ, ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಅವರಿಗೆ ಬರ ಪರಿಸ್ಥಿತಿಯನ್ನು ನಿಭಾಯಿಸಲು ಎನ್‌ಡಿಆರ್‌ಎಫ್ ನಿಧಿಯಿಂದ 2,434 ಕೋಟಿ ರೂ.ಗಳನ್ನು ಪರಿಹಾರವಾಗಿ ಒದಗಿಸಲು ಮನವಿ ಸಲ್ಲಿಸಿದ್ದೆವು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬರದಿಂದಾಗಿ ಒಟ್ಟು 16,662 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ನಷ್ಟ ರಾಜ್ಯದಲ್ಲಿ ಸಂಭವಿಸಿರುವುದನ್ನು ರಾಜನಾಥ್‌ಸಿಂಗ್ ಅವರ ಗಮನಕ್ಕೆ ತರಲಾಗಿತ್ತು ಎಂದು ದೇಶಪಾಂಡೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News