‘ಕಾವೇರಿ ಆನ್ಲೈನ್ ಸೇವೆ’ ನ.16ರಂದು ಉದ್ಘಾಟನೆ: ಸಚಿವ ದೇಶಪಾಂಡೆ
Update: 2018-11-15 13:07 GMT
ಬೆಂಗಳೂರು, ನ. 15: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜನಪರ ಉಪಕ್ರಮವಾದ ‘ಕಾವೇರಿ ಆನ್ಲೈನ್ ಸೇವೆ’ಗಳನ್ನು ನಾಳೆ (ನ.16) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ನ.12ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಆ ಕಾರ್ಯಕ್ರಮ ನ.16ರ ಶುಕ್ರವಾರ ಬೆಳಗ್ಗೆ 10ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾವೇರಿ ಆನ್ಲೈನ್ ಸೇವೆಗಳನ್ನು ಸಿಎಂ ಕುಮಾರಸ್ವಾಮಿ ಲೋಕಾರ್ಪಣೆ ಮಾಡಲಿದ್ದಾರೆಂದು ಅವರು ಹೇಳಿದ್ದಾರೆ.
ಕಾವೇರಿ ಆನ್ಲೈನ್ ಸೇವೆಗಳ ಜಾಲತಾಣದಲ್ಲಿ ಆಸ್ತಿ ನೋಂದಣಿ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸೇವೆಗಳೆಲ್ಲವೂ ಸಾರ್ವಜನಿಕರಿಗೆ ಅತ್ಯಂತ ಸುಲಭವಾಗಿ, ಅವರಿರುವ ಜಾಗದಲ್ಲೇ ಸಿಗಲಿದೆ. ಜನರು ತಂತ್ರಜ್ಞಾನವನ್ನು ಆಧರಿಸಿದ ಈ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.