ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಹಿಂದೂ ಧರ್ಮದಲ್ಲಿಲ್ಲ: ಸಾಹಿತಿ ಪ್ರೊ.ಕೆ.ಎಸ್.ಭಗವಾನ್

Update: 2018-11-21 16:25 GMT

ಮೈಸೂರು,ನ.21: ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವಂತಹ ಮನೋಭಾವ ಹಿಂದೂ ಧರ್ಮದಲ್ಲಿ ಇಲ್ಲ. ಹಾಗಾಗಿ ಹಿಂದೂ ಧರ್ಮವನ್ನು ವಿರೋಧಿಸಬೇಕಾಗುತ್ತದೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಬುಧವಾರ ಆಯೋಜಿಸಿದ್ದ 'ಪ್ರವಾದಿ ಮಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ' ಎಂಬ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಸ್ಲಾಂ ಧರ್ಮದಲ್ಲಿ ಎಲ್ಲರನ್ನೂ ಪ್ರೀತಿಸಿ ಸಮಾನತೆಯಿಂದ ನೋಡುವ ವಾತಾವರಣವಿದೆ. ಕ್ರಿಶ್ಚಿಯನ್ ಧರ್ಮದಲ್ಲೂ ಅಂತಹದೇ ವಾತಾವರಣ ಇದೆ. ಆದರೆ ಹಿಂದೂ ಧರ್ಮದಲ್ಲಿ ಅಂತಹ ವಾತಾವರಣ ಇಲ್ಲದೆ ಇರುವುದರಿಂದ ಹಿಂದೂ ಧರ್ಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉದಾಹರಣಗೆ ಇಸ್ಲಾಂ ಧರ್ಮವನ್ನು ನಾವು ಸ್ವೀಕರಿಸಿದರೆ ಆ ಧರ್ಮದ ಗುರುಗಳಾಗಬಹುದು. ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದರೆ ಫಾದರ್ ಆಗಬಹುದು. ಆದರೆ ಹಿಂದೂ ಧರ್ಮದಲ್ಲಿ ಪುರೋಹಿತರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ಟೀಕೆ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ. ಹಿಂದೂ ಧರ್ಮದಲ್ಲಿ ಸಮಾನತೆ ಎಂಬುದೇ ಇಲ್ಲ. ನಾವು ಯಾರು ಏನೇ ಹೇಳಿದರು ನಂಬಬಾರದು. ಎಲ್ಲಾ ಧರ್ಮಗಳ ಕುರಿತು ಅಧ್ಯಯನ ಮಾಡಿ ವಿಶ್ಲೇಷಣೆ ಮಾಡಬೇಕು. ಆಗ ನಮಗೆ ಯಾವ ಧರ್ಮ ಸರಿ ಎನಿಸುತ್ತದೊ ಆ ಧರ್ಮವನ್ನು ಅನುಸರಿಸಬೇಕು ಎಂದು 2600 ವರ್ಷಗಳ ಹಿಂದೆಯೇ ಬುದ್ದ ಸಂದೇಶ ನೀಡಿದ್ದರು. ಅದನ್ನು ಎಲ್ಲರೂ ಮೈಗೂಡಿಸಿಕೊಂಡು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅಧ್ಯಯನ ಮಾಡಬೇಕಿದೆ ಎಂದು ಹೇಳಿದರು.

ಪ್ರವಾದಿ ಮಹಮ್ಮದ್ ರ ಸಂದೇಶಗಳು ಸಾರ್ವಕಾಲಿಕ. ದ್ವೇಷ, ಹಿಂಸೆ ಹಾಗೂ ಸ್ವಾರ್ಥಗಳು ಸಾಮಾನ್ಯವಾಗಿರುವ ಇಂದಿನ ವಾತಾವರಣದಲ್ಲಿ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆ ಮುಖ್ಯ ಎಂಬುದನ್ನು ಹೇಳಿದ್ದಾರೆ. ಅದನ್ನು ಎಲ್ಲರೂ ಅನುಸರಿಸಬೇಕು ಎಂದು ಹೇಳಿದರು.

ಪತ್ರಕರ್ತ ಟಿ.ಗುರುರಾಜ್ ಮಾತನಾಡಿ, ಪ್ರವಾದಿ ಮಹಮ್ಮದ್ ಅವರು ಬೇರೊಂದು ಧರ್ಮವನ್ನು ಯಾರು ಗೌರವಿಸುವುದಿಲ್ಲವೋ ಅವರು ನಿಜವಾದ ಮುಸ್ಲಿಂ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಎಲ್ಲಾ ಧರ್ಮದವರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಯಾರನ್ನೋ ಟೀಕೆ ಮಾಡುವ ಭರದಲ್ಲಿ ಮತ್ತೊಬ್ಬರಿಗೆ ಘಾಸಿಯಾಗುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.

ಕಾರ್ಯಕ್ರಮದ ಸಾನಿದ್ಯವನ್ನು ಬಸವ ಧ್ಯಾನಮಂದಿರದ ಬಸವಲಿಂಗಮೂರ್ತಿ ಶರಣರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹ ಸಮಿತಿ ಸದಸ್ಯರಾದ ಜನಾಬ್ ಅಕ್ಬರ್ ಅಲಿ ಉಡುಪಿ, ಶೇಖ್ ಜಬೀವುಲ್ಲಾ, ಅಬ್ದುಲ್ ರಹಿಮಾನ್ ಖಾನ್ ಗೌಹರ್ ತರಿಕೆರೆ, ಸೈಯದ್ ಅಹ್ಮದ್ ರಾಹಿಲ್, ಮೈಸೂರು ಜಿಲ್ಲಾಧ್ಯಕ್ಷ ಮುಹಮದ್ ಪಾಷಾ, ವಲಯ ಸಂಚಾಲಕ ಅಜದ್‍ವುಲ್ಲಾ ಖಾನ್ ಪಾಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News