ಧರ್ಮಗಳಿಗೆ ಅಗೌರವ ನೀಡುವುದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿ: ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ

Update: 2018-11-21 16:54 GMT

ಯಾದಗಿರಿ, ನ.21: ಯಾವ ಧರ್ಮವೂ ಸಮಾಜದಲ್ಲಿ ಶಾಂತಿ ಕದಡುವಂತೆ ಬೋಧಿಸುವುದಿಲ್ಲ. ಆದರೂ, ಅಶಾಂತಿ ಹೆಚ್ಚುತ್ತಿದೆ. ಸಮಾಜದಲ್ಲಿ ಕೂಡಿ ಬಾಳುವ ಪರಂಪರೆ, ಸೌಹಾರ್ದ ಸಂಸ್ಕೃತಿಯ ಕಣ್ಮರೆ ಸಮಾಜದಲ್ಲಿನ ಅಶಾಂತಿಗೆ ಕಾರಣವಾಗುತ್ತಿದೆ ಎಂದು ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ ಅಭಿಪ್ರಾಯಪಟ್ಟಿದ್ದಾರೆ. 

ಬುಧವಾರ ಯಾದಗಿರಿ ನಗರದ ಮೈಲಾಪುರ ಅಗಸಿಯಲ್ಲಿ ತಂಜೀಮುಲ್ ಮುಸ್ಲಿಮಿನ್ ಹಾಗೂ ಬೈತುಲ್ ಮಾಲ್ ವತಿಯಿಂದ ಈದ್ ಮಿಲಾದ್ ಹಬ್ಬದ ಅಂಗವಾಗಿ ಸಮಾಜದ ಮುಖಂಡರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅನೇಕ ಮಹಿನೀಯರು ನೆಲೆಸಿದ್ದ ಭರತ ಭೂಮಿಯಲ್ಲೇಕೆ ಅಶಾಂತಿ ಹರಡುತ್ತಿದೆ. ನಮ್ಮ ಹಿರಿಯರು ಶಾಂತಿ ನೆಲೆಸಲು ಅನುಸರಿಸಿದ್ದ ಮಾರ್ಗ ಯಾವುದು ಎಂಬ ಕುರಿತು ಚಿಂತನ ಮಂಥನ ನಡೆಸಬೇಕಿದೆ ಎಂದರು.

ಧರ್ಮಗಳನ್ನು ಅಗೌರವಿಸುವುದರಿಂದ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದರಿಂದ ಯಾರಿಗೆ ಲಾಭವಾಗಿದೆಯೋ ಯಾರಿಗೂ ಗೊತ್ತಿಲ್ಲ. ಆದರೆ, ಇಂತಹ ಕೃತ್ಯಗಳಿಂದ ಪರಸ್ಪರ ಪ್ರೀತಿ, ಸೌಹಾರ್ದತೆ, ಆತ್ಮೀಯತೆ ಕುಸಿದು ದ್ವೇಷಾಸೂಯೆ ಮಾತ್ರ ಹೆಚ್ಚಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರವಾದಿ ಮಹಮ್ಮದ್ ಪೈಗಂಬರ್ ಎಲ್ಲರಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ನಡೆಸಿದ್ದರು. ಅವರ ತತ್ವಾದರ್ಶ ಅಳವಡಿಸಿಕೊಂಡು ಎಲ್ಲ ಧರ್ಮದವರು ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ಕೂಡಿ ಬಾಳುವ ಪರಂಪರೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಶಾಸಕ ನಾಗನಗೌಡ ಕಂದಕೂರು ಮಾತನಾಡಿ, ಜಾತಿ, ಧರ್ಮ ಇಂದು ನಿನ್ನೆ ಹುಟ್ಟಿಲ್ಲ, ಮಾನವನ ನಾಗರಿಕತೆ ಹುಟ್ಟಿನಿಂದಲೂ ಇದೆ. ಆದರೆ, ಸಮಾಜದಲ್ಲಿ ಜಾತಿ, ಧರ್ಮಗಳು ಪ್ರಾಧಾನ್ಯತೆ ಪಡೆಯುತ್ತಿವೆ. ಸರ್ವ ಧರ್ಮಗಳಡಿ ವೈವಿಧ್ಯ ಆಚರಣೆಗಳನ್ನು ಹಮ್ಮಿಕೊಳ್ಳುತ್ತಾ ಸಾಮರಸ್ಯದಿಂದ ಬದುಕಿದ್ದ ಸಮಾಜಕ್ಕೆ ಇಂದು ಏನಾಗಿದೆ. ಸರ್ವರನ್ನು, ಸಮಸ್ತ ಧರ್ಮ, ಆಚರಣೆಗಳನ್ನು ನಾವು ಗೌರವಿಸುವುದನ್ನು ಕಲಿಯಬೇಕು ಎಂದು ಹೇಳಿದರು.

ಮುಸ್ಲಿಂ ಧರ್ಮಗುರು ಮೌಲಾನಾ ನಿಜಾಮುದ್ದೀನ್ ಮಾತನಾಡಿ, ಮಾನವರಲ್ಲಿ ಸಮಾನತೆ ಮತ್ತು ಜೀವನದಲ್ಲಿ ಪ್ರಾಮಾಣಿಕತೆ ಕುರಿತು ಪ್ರವಾದಿ ಮಹಮದ್ ಪೈಗಂಬರ್ ಜಗತ್ತಿಗೆ ಸಾರಿದ ಸಂದೇಶ ಸರ್ವ ಕಾಲಕ್ಕೂ ಪ್ರಸ್ತುತ. ಆ ಸನ್ಮಾರ್ಗದಲ್ಲಿ ನಾವುಗಳು ಹೆಜ್ಜೆ ಹಾಕಬೇಕಿದೆ ಎಂದರು.

ಶಾಸಕ ನಾಗನಗೌಡ ಕಂದಕೂರ, ಚನ್ನಾರೆಡ್ಡಿ ಪಾಟೀಲ್ ತುನ್ನೂರು, ಸಿದ್ದಪ್ಪಹೊಟ್ಟಿ, ಮರೆಪ್ಪಈಟೆ, ಮಲ್ಲಣ್ಣ ದಾಸನಕೇರಿ, ಎಂ.ಕೆ.ಬಿರನೂರ, ಶ್ರೀನಿವಾಸರೆಡ್ಡಿ ಕಂದಕೂರ ಅವರನ್ನು ಸನ್ಮಾನಿಸಲಾಯಿತು.

ಇಸ್ಲಾಂ ಧರ್ಮದ ಪುಣ್ಯ ಕ್ಷೇತ್ರಗಳಾದ ಮಕ್ಕಾ ಮತ್ತು ಮದೀನಾದ ಮಾದರಿಗಳನ್ನು ತಯಾರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಧರ್ಮ ಗುರುಗಳಿಂದ ಧಾರ್ಮಿಕ ಪಠಣ ಗಮನ ಸೆಳೆಯಿತು. ಮುಸ್ಲಿಂ ಸಮಾಜದ ಮುಖಂಡರಾದ ಲಾಯಕ್ ಬಾದಲ್ ಹುಸೇನ್, ಜಿನಾಲಿ ಅಫಘಾನಿ, ಮನಸೂರ್ ಅಫಖಾನ್, ಮಹಮ್ಮದ್ ಇಸಾಖ್, ಶೇಖ್ ಜಕಿಯುದ್ದೀನ್, ನಗರಸಭೆ ಸದಸ್ಯ ಮನ್ಸೂರ್, ಸಾಜೀದ್ ಹಯಾತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News