ರಾಜ್ಯದ ಯಾವುದೇ ಶಾಲೆಗಳಿಗಿಲ್ಲ ಸ್ವಚ್ಛ ವಿದ್ಯಾಲಯ ಪುರಸ್ಕಾರ !
ಬೆಂಗಳೂರು, ನ.22: ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳು ಹಾಗೂ 3 ಸಾವಿರ ಖಾಸಗಿ ಶಾಲೆಗಳಿದ್ದರೂ, ರಾಜ್ಯದ ಯಾವುದೇ ಶಾಲೆಗಳಿಗೆ 2017-18 ನೇ ಸಾಲಿನ ಸ್ವಚ್ಛ ವಿದ್ಯಾಲಯ ಪುರಸ್ಕಾರ ದೊರೆತಿಲ್ಲ.
ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ 2014-15ರ ಶೈಕ್ಷಣಿಕ ವರ್ಷದಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೇಶಾದ್ಯಂತ 52 ಶಾಲೆಗಳು ರಾಷ್ಟ್ರೀಯ ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ರಾಜ್ಯದಿಂದಲೂ 38 ಶಾಲೆಗಳಿಂದ ಅರ್ಜಿ ಸಲ್ಲಿಸಲಾಗಿತ್ತು.
ಅಂತಿಮ ಪಟ್ಟಿಯಲ್ಲಿ ರಾಜ್ಯದ ಯಾವುದೇ ಶಾಲೆಗೂ ಪ್ರಶಸ್ತಿ ಏಕೆ ದೊರೆಯಲಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವನ್ನು ಕೇಳಲು ಇಲಾಖೆ ನಿರ್ಧರಿಸಿದೆ. ಈ ಬಾರಿ 38 ಶಾಲೆಗಳ ಹೆಸರನ್ನು ಪ್ರಶಸ್ತಿ ಪಟ್ಟಿಗೆ ಸೇರಿಸಲು ಕಳುಹಿಸಲಾಗಿತ್ತು ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ರೇಜು ಹೇಳಿದ್ದಾರೆ.
ಆಯ್ಕೆಯ ಮಾನದಂಡ
* ಶಾಲೆಯ ನೀರು, ಒಳಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ.
* ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯ.
* ಮಕ್ಕಳ ಸುರಕ್ಷತೆಗೆ ಒತ್ತು.
* ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಮಿತಿ ಆಯ್ದ ಶಾಲೆಗಳ ಪರಿಶೀಲನೆ.
100 ಅಂಕಗಳ ಆಧಾರದ ಮೇಲೆ ಪುರಸ್ಕಾರ
* ನೀರಿಗೆ 22.
* ಶೌಚಾಯಲಕ್ಕೆ 28.
* ಕೈ ತೊಳೆಯುವ ಸ್ಥಳ ಹಾಗೂ ಸೋಪಿಗೆ 20.
* ಕಾರ್ಯನಿರ್ವಹಣೆಗೆ 15.
* ಸಾಮರ್ಥ್ಯ ಅಭಿವೃದ್ಧಿಗೆ 15.