ತುಮಕೂರು: ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಮಮತೆಯ ತೊಟ್ಟಿಲು ಪ್ರಾರಂಭಿಸಲು ಎಡಿಸಿ ಸೂಚನೆ

Update: 2018-11-22 17:54 GMT

ತುಮಕೂರು,ನ.22: ಜಿಲ್ಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆ ಸೇರಿ ಮಧುಗಿರಿ, ಪಾವಗಡ, ಗುಬ್ಬಿ, ಚಿ.ನಾ.ಹಳ್ಳಿ, ತಿಪಟೂರು, ಕುಣಿಗಲ್ ಹಾಗೂ ತುರುವೇಕೆರೆ ತಾಲೂಕು ಆಸ್ಪತ್ರೆಗಳಲ್ಲಿ ಪ್ರಾರಂಭಿಸಿರುವಂತೆ ಶಿರಾ ಮತ್ತು ಕೊರಟಗೆರೆ ತಾಲೂಕು ಆಸ್ಪತ್ರೆಗಳಲ್ಲಿಯೂ ಮಮತೆಯ ತೊಟ್ಟಿಲನ್ನು ಪ್ರಾರಂಭಿಸಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಡಿಹೆಚ್‍ಓ ಡಾ.ಚಂದ್ರಿಕಾ ಅವರಿಗೆ ಸೂಚಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ತನಿಖಾ ಸಮಿತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಹೆತ್ತವರಿಗೆ ಬೇಡದ ನವಜಾತ ಶಿಶುಗಳನ್ನು ಆರೈಕೆ ಮಾಡಲು ಈ ಮಮತೆಯ ತೊಟ್ಟಿಲನ್ನು ಪ್ರಾರಂಭಿಸಲಾಗಿದೆ. ಜಿಲ್ಲಾಸ್ಪತ್ರೆ ಹಾಗೂ ಜಿಲ್ಲೆಯ 7 ತಾಲೂಕು ಆಸ್ಪತ್ರೆಗಳಲ್ಲದೆ ತುಮಕೂರಿನ ಬಾಲಕಿಯರ ಬಾಲಮಂದಿರ ಹಾಗೂ ಕೋಟಗುಡ್ಡ, ನಾಗವಲ್ಲಿ, ನೊಣವಿನಕೆರೆ, ಹೊನ್ನವಳ್ಳಿ, ಯಡಿಯೂರು, ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಮಮತೆಯ ತೊಟ್ಟಿಲು ಕಾರ್ಯಾರಂಭ ಮಾಡಿದೆ. ಹೆತ್ತವರು ತಮಗೆ ಬೇಡದ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಮಗುವಿನ ಪ್ರಾಣಕ್ಕೆ ಕುತ್ತು ತರುವ ಪ್ರಸಂಗಗಳು ಹೆಚ್ಚಾಗುತ್ತಿದ್ದು, ಇದರ ನಿವಾರಣೆಗಾಗಿ ಮಮತೆಯ ತೊಟ್ಟಿಲನ್ನು ಪ್ರಾರಂಭಿಸಲಾಗಿದೆ. ಯಾರೇ ಆಗಲಿ ಪೋಷಕರ ಪತ್ತೆಯಿಲ್ಲದ ನವಜಾತ ಶಿಶುಗಳನ್ನು ಕಂಡಲ್ಲಿ ಈ ಮಮತೆಯ ತೊಟ್ಟಿಲಿಗೆ ತಂದು ಒಪ್ಪಿಸಬಹುದಾಗಿದೆ. ಮಗುವನ್ನು ತೊಟ್ಟಿಲಿಗೆ ಒಪ್ಪಿಸಿದವರ ಪೂರ್ವಾಪರವನ್ನು ವಿಚಾರಿಸುವಂತಿಲ್ಲ.  ಮಗುವಿಗೆ ಸೂಕ್ತ ಪ್ರಥಮ ಚಿಕಿತ್ಸೆ ನೀಡಿದ ನಂತರ ಕುಣಿಗಲ್ ತಾಲೂಕಿನ ಭಕ್ತರ ಹಳ್ಳಿಯಲ್ಲಿ ಹೊಸದಾಗಿ ತೆರೆದಿರುವ ದತ್ತು ಕೇಂದ್ರದಲ್ಲಿ ಪಾಲನೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಖಾಸಗಿ ಶಾಲೆಗಳ ಮಕ್ಕಳು ಸೇರಿದಂತೆ ಸರ್ಕಾರಿ ಶಾಲಾ/ ಕಾಲೇಜು ಹಾಗೂ ವಿವಿಧ ಇಲಾಖೆಗಳ ವಸತಿಯುತ ಶಾಲೆಗಳ ಮಕ್ಕಳಿಗೆ 'ಗುಡ್ ಟಚ್-ಬ್ಯಾಡ್ ಟಚ್' ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಾಕಿ ಇರುವ 6 ಮಕ್ಕಳ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು. ಮದರಸಗಳನ್ನು ಬಾಲನ್ಯಾಯ ಕಾಯ್ದೆಯಡಿ ನೋಂದಣಿ ಮಾಡಿಸಲು ಮದರಸಾಗಳ ಮುಖ್ಯಸ್ಥರ ಸಭೆ ಕರೆದು ಅರಿವು ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ, ಭಕ್ತರಹಳ್ಳಿ ದತ್ತು ಕೇಂದ್ರದಲ್ಲಿ ಈಗಾಗಲೇ ಹೆತ್ತವರಿಗೆ ಬೇಡವಾದ 10 ನವಜಾತ ಶಿಶುಗಳನ್ನು ಪೋಷಣೆ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರಲ್ಲದೆ, ಇಲಾಖೆಯಿಂದ ವಿಶೇಷ ಪಾಲನಾ ಯೋಜನೆಯಡಿ 68 ಹೆಚ್.ಐ.ವಿ/ಏಡ್ಸ್ ಸೋಂಕಿತ ಮಕ್ಕಳು ಸೇರಿದಂತೆ ಒಟ್ಟು 456 ಹಾಗೂ ಪ್ರಾಯೋಜಿತ ಕಾರ್ಯಕ್ರಮದಡಿ ವಿವಿಧ ರೀತಿಯ ಸಂಕಷ್ಟದಲ್ಲಿರುವ 149 ಮಕ್ಕಳಿಗೆ ಆರ್ಥಿಕ ಸೌಲಭ್ಯವನ್ನು ನೀಡಲಾಗುತ್ತಿದೆ. ದಯಾಭವನ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಭಕ್ತರಹಳ್ಳಿಯಲ್ಲಿ ಪ್ರಾರಂಭಿಸಲಾಗಿರುವ ದತ್ತು ಕೇಂದ್ರದಲ್ಲಿ ಪ್ರಸ್ತುತ 9 ಮಕ್ಕಳು ದತ್ತು ನೀಡಲು ಅರ್ಹರಿರುತ್ತಾರೆ. ದತ್ತು ಪಡೆಯಲು ಬಯಸುವ ಪೋಷಕರನ್ನು ಗುರುತಿಸಿ ಮಾರ್ಗಸೂಚಿಯನ್ವಯ ದತ್ತು ನೀಡಲಾಗುವುದು ಎಂದು ತಿಳಿಸಿದರು. 

ಬಾಲನ್ಯಾಯ ಮಂಡಳಿಯ ಸದಸ್ಯೆ ಆಶಾ ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿಯ ಸಹಕಾರದಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡದಂತೆ ಮಕ್ಕಳು ಹಾಗೂ ಪೋಷಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಅಧಿಕಾರಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News