ಉತ್ತರ ಕರ್ನಾಟಕ ನಿರ್ಲಕ್ಷ್ಯ ಖಂಡಿಸಿ ಅಧಿವೇಶನದಲ್ಲಿ ಹೋರಾಟ: ಜಗದೀಶ್ ಶೆಟ್ಟರ್
Update: 2018-11-28 14:43 GMT
ಬೆಂಗಳೂರು, ನ. 28: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದು, ಇದನ್ನು ಖಂಡಿಸಿ ಚಳಿಗಾಲದ ಅಧಿವೇಶನದಲ್ಲಿ ಹೋರಾಟ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ಅನುದಾನವನ್ನು ಕೇವಲ ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ನೀಡುತ್ತಿದ್ದು, ಬಹುತೇಕ ಸಂಪುಟ ಸಭೆಗಳನ್ನು ಮೇಲ್ಕಂಡ ಜಿಲ್ಲೆಗಳ ಯೋಜನೆಗಳಿಗೆ ಒಪ್ಪಿಗೆ ನೀಡಲು ಸೀಮಿತಗೊಳಿಸಲಾಗಿದೆ ಎಂದು ದೂರಿದರು.
ದೇವೇಗೌಡ, ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ ಸೇರಿದಂತೆ ಎಲ್ಲರೂ ಉ.ಕ. ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆಂದು ಟೀಕಿಸಿದ ಅವರು, ಲೋಕೋಪಯೋಗಿ ಇಲಾಖೆ ಹಾಸನ ಮತ್ತು ಹೊಳೆನರಸೀಪುರಕ್ಕೆ ಸೀಮಿತ ಆಗಿದೆ. ಈ ಬಗ್ಗೆ ಉ.ಕ. ಭಾಗದ ಜನರಿಗೆ ಆಕ್ರೋಶವಿದ್ದು, ಡಿ.10ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಹೋರಾಟ ಮಾಡಲಾಗುವುದು ಎಂದರು.