‘ಕರ್ನಾಟಕ-ಅಮೆರಿಕ’ ವಾಣಿಜ್ಯ ಸಂಬಂಧ ಬಲವರ್ಧನೆಗೆ ಒಡಂಬಡಿಕೆ: ಸಚಿವ ದೇಶಪಾಂಡೆ

Update: 2018-11-30 14:01 GMT

ಬೆಂಗಳೂರು, ನ. 30: ಕರ್ನಾಟಕ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆಗಾಗಿ ಸದ್ಯದಲ್ಲೇ ಅಧಿಕಾರಿಗಳು ಮತ್ತು ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‌ನ ಪದಾಧಿಕಾರಿಗಳನ್ನು ಒಳಗೊಂಡ ಕಾರ್ಯ ತಂಡವನ್ನು ರಚಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ರಾಜ್ಯ ಸರಕಾರ ಮತ್ತು ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‌ನ ನಿಯೋಗದ ನಡುವೆ ನಡೆದ ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕರ್ನಾಟಕ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆಗೆ ಅಗತ್ಯ ಕೌಶಲ್ಯ ಮರುಪೂರಣೆ ಕುರಿತು ಚರ್ಚಿಸಲಾಗಿದೆ ಎಂದರು.

ಈ ಕಾರ್ಯತಂಡವು ಸದ್ಯದಲ್ಲೇ ಮಾಡಿಕೊಳ್ಳಲು ಉದ್ದೇಶಿಸಿರುವ ಒಡಂಬಡಿಕೆಗೆ ಅಗತ್ಯ ನೀಲನಕ್ಷೆಯನ್ನು ಸಿದ್ಧಪಡಿಸಲಿದೆ. ಅಮೆರಿಕದೊಂದಿಗಿನ ವಾಣಿಜ್ಯ ಸಂಬಂಧ ಬಲವರ್ಧನೆಗೆ ವೇಗವನ್ನು ಒದಗಿಸುವುದರಿಂದ ಕೌಶಲ್ಯಾಭಿವೃದ್ಧಿ, ವಾಣಿಜ್ಯ ವಹಿವಾಟು ಮತ್ತು ಬಂಡವಾಳ ಹೂಡಿಕೆಗೆ ದಾರಿ ಸುಗಮವಾಗಲಿದೆ ಎಂದರು.

ಇದು ಸಾಧ್ಯವಾಗಬೇಕಾದರೆ ಕೌಶಲ್ಯಾಭಿವೃದ್ಧಿ, ಸಮುದಾಯ ಕೌಶಲ್ಯ ಡಿಪ್ಲೊಮಾ, ಉದ್ಯಮಶೀಲತೆ, ಸಾಗರೋತ್ತರ ಉದ್ಯೋಗಾವಕಾಶ ಸೌಲಭ್ಯ ಮತ್ತು ಪ್ರಶಿಕ್ಷಣ (ಅಪ್ರೆಂಟಿಸ್‌ಶಿಪ್) ಸೇರಿ ಇನ್ನಿತರ ವಿಚಾರಗಳ ಬಗ್ಗೆ ಪರಸ್ಪರ ವಿನಿಮಯದೊಂದಿಗೆ ಇದನ್ನು ಆರಂಭಿಸಬೇಕಾದ ಅಗತ್ಯವಿದೆ ಎಂದು ದೇಶಪಾಂಡೆ ವಿವರಿಸಿದರು.

ವಾಣಿಜ್ಯ ವಹಿವಾಟು ಜಾಗತಿಕ ಮಟ್ಟದಲ್ಲಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ 2 ಮತ್ತು 3ನೆ ಸ್ತರದ ನಗರಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉದ್ಯೋಗಿಗಳಿಗೆ ಅಗತ್ಯ ಕೌಶಲ್ಯ ಮರುಪೂರಣೆ, ತರಬೇತಿಗಳ ಕಡೆಗೂ ಗಮನ ಹರಿಸಲಾಗುವುದು. ಜೊತೆಗೆ, ಅಮೆರಿಕದ ಶಿಕ್ಷಣ ಸಂಸ್ಥೆಗಳೊಂದಿಗೆ ಸಮುದಾಯ ಕೌಶಲ್ಯ ಡಿಪ್ಲೊಮಾ ಕುರಿತು ಸಹಕಾರ ಮತ್ತು ಸಹಭಾಗಿತ್ವ ಸ್ಥಾಪನೆಯ ಸಾಧ್ಯತೆಯತ್ತ ಗಮನಿಸಲಾಗುವುದು. ಉದ್ಯಮಶೀಲತೆ ಮತ್ತು ನವೋದ್ಯಮ ಸ್ಥಾಪನೆಗೆ ಬೇಕಾದ ವಾತಾವರಣ ರಾಜ್ಯದಲ್ಲಿ ಈಗಾಗಲೇ ಇದ್ದು, ಇದನ್ನು ಮತ್ತಷ್ಟು ಸುಧಾರಿಸಲಾಗುವುದು.

ಉದ್ಯಮಿ ಮತ್ತು ಉದ್ದಿಮೆಗಳನ್ನು ಒಂದು ಜಾಲಕ್ಕೆ ತರುವ ಮೂಲಕ ರಾಜ್ಯದ ಯುವಜನರಿಗೆ ವಿದೇಶಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಹಾಗೂ ಉದ್ದಿಮೆ ನಡೆಸಲು ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದೇಶಪಾಂಡೆ ಹೇಳಿದರು.

ಸ್ವಸಹಾಯ ಗುಂಪುಗಳ ಮತ್ತು ಕೃಷಿರಂಗದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಪರಸ್ಪರ ಕೈಜೋಡಿಸಿ ಬ್ರ್ಯಾಂಡಿಂಗ್ ಮುಂತಾದ ಚಟುವಟಿಕೆಗಳನ್ನು ನಡೆಸಬೇಕಾಗಿದೆ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ನಮ್ಮ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯಗಳನ್ನು ಒದಗಿಸಬೇಕಾಗಿದೆ ಎಂದು ದೇಶಪಾಂಡೆ ಪ್ರತಿಪಾದಿಸಿದರು.

ಸಭೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್, ಇಂಡೊ-ಅಮೆರಿಕ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎಸ್.ಕೆ. ಸರ್ಕಾರ್, ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಮಾಂಥಾ, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ರಫುಲ್ ಹಸನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News