ಬಾಗಲಕೋಟೆ: ಎಸ್ಪಿ ನಿವಾಸದ ಮುಂದೆಯೇ ಗುಂಡು ಹಾರಿಸಿ ಪೇದೆ ಆತ್ಮಹತ್ಯೆ
ಬಾಗಲಕೋಟೆ, ಡಿ.1: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ನಿವಾಸದ ಮುಂದೆಯೇ ಪೊಲೀಸ್ ಪೇದೆಯೋರ್ವ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ ಎನ್ನಲಾಗಿದೆ.
ಕೊಪ್ಪಳ ಜಿಲ್ಲೆಯ ಮಿಟ್ಟಲಕೋಡ ಗ್ರಾಮದ ಮಂಜುನಾಥ್ ಹರಿಜನ್(26) ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಪೇದೆ ಎಂದು ತಿಳಿದುಬಂದಿದೆ.
ಕರ್ತವ್ಯಕ್ಕೆ ನೀಡಲಾಗಿದ್ದ 303 ರೈಫಲ್ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇವರು ಹಲವು ದಿನಗಳಿಂದ ಬಾಗಲಕೋಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬಾಗಲಕೋಟೆಯ ಎಸ್ಪಿ ಸಿ.ಬಿ.ರಿಷ್ಯಂತ್ ನಿವಾಸಕ್ಕೆ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಶನಿವಾರ ಎಸ್ಪಿ ಮನೆ ಎದುರೇ ಕರ್ತವ್ಯಕ್ಕೆಂದು ನೀಡಲಾಗಿದ್ದ ರೈಫಲ್ 303ಯಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸ್ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.