ಬರ ಪರಿಹಾರ: ಶೀಘ್ರ ಬಿಡುಗಡೆ ಕೋರಿ ಪ್ರಧಾನಿಗೆ ದೇಶಪಾಂಡೆ ಪತ್ರ

Update: 2018-12-03 17:26 GMT

ಬೆಂಗಳೂರು, ಡಿ. 3: ತೀವ್ರ ಬರಗಾಲದಿಂದ ತತ್ತರಿಸಿರುವ ರಾಜ್ಯದ ಬಹುತೇಕ ಭಾಗಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅನುವಾಗುವಂತೆ ಆದಷ್ಟು ಬೇಗ ಎನ್‌ಡಿಆರ್‌ಎಫ್ ವತಿಯಿಂದ ಪರಿಹಾರ ಬಿಡುಗಡೆ ಮಾಡಬೇಕೆಂದು ಕೋರಿ ಪ್ರಧಾನಮಂತ್ರಿ, ಕೇಂದ್ರ ಗೃಹ ಮತ್ತು ಕೃಷಿ ಸಚಿವರಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೋಮವಾರ ಪತ್ರ ಬರೆದಿದ್ದಾರೆ.

ತಮ್ಮ ಪತ್ರದಲ್ಲಿ ಅವರು ‘‘ರಾಜ್ಯದಲ್ಲಿ ಹಿಂಗಾರು ಕೈಕೊಟ್ಟಿದ್ದು ಇಡೀ ರಾಜ್ಯದಲ್ಲಿ ಶೇಕಡ 49ರಷ್ಟು ಮಳೆ ಕೊರತೆ ಎದುರಾಗಿದೆ. ಅದರಲ್ಲೂ ಉತ್ತರ ಒಳನಾಡಿನಲ್ಲಿ ಬಿತ್ತನೆ ಮಾಡಿರುವ ಶೇ. 90ರಷ್ಟು ಹಿಂಗಾರು ಬೆಳೆ ಒಣಗುತ್ತಿದ್ದು, ಆ ಭಾಗದಲ್ಲಿ ಶೇ. 67ರಷ್ಟು ತೀವ್ರ ಮಳೆ ಕೊರತೆ ಎದುರಾಗಿದೆ, ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘‘ರಾಜ್ಯದ ಮನವಿಗೆ ಸ್ಪಂದಿಸಿ ಕೇಂದ್ರ ಸರಕಾರವು ಬರ ಅಧ್ಯಯನಕ್ಕೆ ಕಳಿಸಿದ್ದ 10 ಸದಸ್ಯರ ತಂಡವು ತನ್ನ ವರದಿಯನ್ನು ಒಂದೆರಡು ದಿನಗಳಲ್ಲಿ ನ್ಯಾಷನಲ್ ಎಕ್ಸಿಕ್ಯುಟೀವ್ ಕಮಿಟಿಯ ಉಪಸಮಿತಿಗೆ ಸಲ್ಲಿಸುವ ನಿರೀಕ್ಷೆ ಇದೆ. ಹೀಗಾಗಿ, ಪರಿಹಾರ ಬಿಡುಗಡೆ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಶೀಘ್ರವೇ ರಾಜ್ಯಕ್ಕೆ ಎನ್‌ಡಿಆರ್‌ಎಫ್ ನಿಧಿಯಿಂದ ಪರಿಹಾರವನ್ನು ಬಿಡುಗಡೆ ಮಾಡಿ, ನೆರವಿಗೆ ಧಾವಿಸಬೇಕು. ಇದರಿಂದಾಗಿ, ಬರದಿಂದ ತತ್ತರಿಸುತ್ತಿರುವ ರೈತರಿಗೆ ಕ್ಷಿಪ್ರಗತಿಯಲ್ಲಿ ಒಂದಿಷ್ಟಾದರೂ ಪರಿಹಾರ ಒದಗಿಸಲು ಸಹಾಯವಾಗುತ್ತದೆ, ಎಂದು ಕಂದಾಯ ಸಚಿವರು ತಮ್ಮ ಪತ್ರದಲ್ಲಿ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಲ್ಲದೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೂ ದೇಶಪಾಂಡೆಯವರು ಈ ಪತ್ರವನ್ನು ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News