ಆರ್ಥಿಕವಾಗಿ ಬಡತನದಲ್ಲಿರುವವರಿಗೆ 4 ಲಕ್ಷ ಮನೆ ನಿರ್ಮಾಣ: ಸಚಿವ ಯು.ಟಿ.ಖಾದರ್

Update: 2018-12-06 15:59 GMT

ಮೈಸೂರು,ಡಿ.6: ರಾಜ್ಯದಲ್ಲಿ ಆರ್ಥಿಕವಾಗಿ ಬಡತನದಲ್ಲಿರುವವರಿಗೆ ನಾಲ್ಕು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಮುಂಬರುವ ಜ.26 ರ ಗಣರಾಜ್ಯೋತ್ಸವದಂದು ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಗುರುವಾರ ಭಾರತೀಯ ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆ  ಕ್ರೆಡಾಯ್ ಇಂದಿನಿಂದ ಎರಡು ದಿನಗಳ ವರೆಗೆ ಆಯೋಜಿಸಿರುವ “ನ್ಯೂ ಇಂಡಿಯಾ ಸಮ್ಮಿಟ್” ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಬಡತನದಲ್ಲಿರುವವರನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ರಾಜ್ಯಾದ್ಯಂತ ಒಟ್ಟು ನಾಲ್ಕು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಜ.26 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಒಂದು ಸಾವಿರ ಎಕರೆಯಷ್ಟು ಜಾಗ ಗುರುತಿಸಿದ್ದು, ಅಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಈ ಹಿಂದೆ ಮೂರು ಅಂತಸ್ಥಿನ ಮನೆಗಳನ್ನು ಮಾತ್ರ ನಿರ್ಮಾಣ ಮಾಡಲಾಗುತಿತ್ತು. ಈಗ ಹತ್ತು ಹಂತಸ್ಥಿನ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದ ಇತರೆ ನಗರಗಳಲ್ಲಿ ಈಗಾಗಲೇ ಮನೆ ನಿರ್ಮಾಣ ಮಾಡಲು ಜಾಗಗಳನ್ನು ಗುರುತಿಸಲಾಗಿದ್ದು, ಕೈಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಕ್ರೆಡಾಯ್ ಒಂದು ಉತ್ತಮ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದ್ದು, ರಾಜ್ಯದಲ್ಲೂ ಹೆಚ್ಚು ಹೆಚ್ಚು ಬಂಡವಾಳ ಹೂಡಲು ಮುಂದಾದರೆ ತಮಗೆ ಬೇಕಿರುವ ಅನುಕೂಲಗಳನ್ನು ರಾಜ್ಯ ಸರ್ಕಾರ ಮಾಡಿಕೊಡಲಿದೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣಗೊಂಡರೆ ನಗರಗಳನ್ನು ಅಭಿವೃದ್ದಿಪಡಿಸಬಹುದು. ಇದರಿಂದ ರಾಜ್ಯ ಮತ್ತು ದೇಶ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಯಾರೇ ಸ್ವಂತ ಮನೆಗಳನ್ನು ನಿರ್ಮಾಣ ಮಾಡಲು ಮುಂದಾದರೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ದೇಶದಲ್ಲೇ ಪ್ರಪ್ರಥಮ ಬಾರಿಗೆ ಏಕಗವಾಕ್ಷಿ ಯೋಜನೆಯನ್ನು ನಗರಾಭಿವೃದ್ದಿ ಇಲಾಖೆಯಲ್ಲಿ ತರಲಾಗಿದ್ದು, ಸೂಕ್ತ ದಾಖಲೆಗಳನ್ನು ಒದಗಿಸಿದರೆ ನಿವೇಶನ ಮತ್ತು ಕಟ್ಟಡಗಳ ಅನುಮತಿಯನ್ನು ನಿಗದಿತ ಸಮಯದಲ್ಲಿ ಒದಗಿಸುವುದಾಗಿ ಹೇಳಿದರು.

ಹಿಂದಿನ ಸರ್ಕಾರದಲ್ಲಿ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಪ್ರತಿಯೊಂದು ಕುಟುಂಬದವರಿಗೆ ಮನೆಗಳನ್ನು ನಿರ್ಮಾಣ ಮಾಡಬೇಕೆಂದು ಸಾಕಷ್ಟು ಯೋಜನೆಗಳನ್ನು ನೀಡಿದ್ದರು. ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವುದಾಗಿ ಹೇಳಿದರು.

ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಕ್ರೆಡಾಯ್ ಸಂಸ್ಥೆ ದೇಶಾದ್ಯಂತ ಆವರಿಸಿದ್ದು, ಬಡವರಿಗೆ  ಸೂರು ನಿರ್ಮಿಸಿಕೊಡುವ ಪುಣ್ಯದ ಕೆಲಸವನ್ನು ಮಾಡಬೇಕು ಎಂದು ಹೇಳಿದರು. ಮೈಸೂರಿನ ಒಡೆಯರ ಕಾಲದಲ್ಲಿ ನಿರ್ಮಾಣಗೊಂಡ ಹಲವಾರು ಕಟ್ಟಡಗಳು ಇನ್ನೂ ಗಟ್ಟಿಯಾಗಿ, ಸುಂದರವಾಗಿವೆ. ಅದೇ ಮಾದರಿಯಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲೀವಿಂಗ್ ನ ಸಂಸ್ಥಾಪಕ ಶ್ರೀರವಿಶಂಕರ್ ಗುರೂಜಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಮೇಯರ್ ಪುಷ್ಪಲತಾ ಜಗನ್ನಾಥ್, ಎನ್.ಐ.ಎಸ್ ಮುಖ್ಯಸ್ಥ ಬಾಲಕೃಷ್ಣ ಹೆಗ್ಡೆ, ಸಮ್ಮೇಳನದ ಅಧ್ಯಕ್ಷ ಜಕ್ಷಾಸ್, ಗೀತಾಂಬರನ್, ಕ್ರೆಡಾಯ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಶ್ರೀರಾಮ್, ಕರ್ನಾಟಕ ಮುಖ್ಯಸ್ಥ ಡಾ.ವಿ.ಕೆ.ಜಗದೀಶ್ ಬಾಬು, ಕ್ರೆಡಾಯ್ ಮೈಸೂರಿನ ಅಧ್ಯಕ್ಷ ಚಿನ್ನಸ್ವಾಮಿ, ಎನ್‍ಐಎನ್ ಸಂಘಟನಾ ಸಮಿತಿ ಮುಖ್ಯಸ್ಥ ಡಿ.ಶ್ರೀಹರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News