ಮಂಡ್ಯ: ಬಿಸಿ ನೀರು ಬಿದ್ದು ವಸತಿ ಶಾಲೆ ವಿದ್ಯಾರ್ಥಿಗೆ ಗಾಯ
Update: 2018-12-07 17:14 GMT
ಮಂಡ್ಯ, ಡಿ.7: ನಾಗಮಂಗಲ ತಾಲೂಕು ಕೋಟೆಬೆಟ್ಟ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಬಿಸಿ ನೀರು ಚೆಲ್ಲಿಕೊಂಡು ಸುಟ್ಟುಕೊಂಡಿರುವ ಘಟನೆ ನಡೆದಿದೆ.
ಮಂಡ್ಯ ತಾಲೂಕು ಬಸರಾಳು ಹೋಬಳಿ ಶ್ವೇತ ಸತೀಶ್ ದಂಪತಿ ಪುತ್ರ 6ನೇ ತರಗತಿ ವಿದ್ಯಾರ್ಥಿ ಕೀರ್ತಿಗೆ ಬಿಸಿನೀರು ಬಿದ್ದು ದೇಹದ ಬಲಭಾಗ ಸುಟ್ಟುಹೋಗಿದೆ. ಘಟನೆ ಸಂಬಂಧ ವಸತಿ ಶಾಲೆ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ. ಚಿಕಿತ್ಸೆಯನ್ನೂ ಕೊಡಿಸಿಲ್ಲ ಎಂದು ದೂರಿದ್ದಾರೆ.
ವಸತಿ ಶಾಲೆಯಲ್ಲಿ ಸೋಲಾರ್ ಕೆಟ್ಟು ವರ್ಷವಾಗಿದೆ. ಗುರುವಾರ ಕೀರ್ತಿ ಸ್ನಾನ ಮಾಡಲು ಅಡುಗೆ ಮನೆಯಿಂದ ಬಿಸಿ ತೆಗೆದುಕೊಂಡು ಹೋಗುತ್ತಿದ್ದಾಗ ಜಾರಿಬಿದ್ದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ವಿಚಾರ ತಿಳಿದ ಪೋಷಕರು ಮಗನನ್ನು ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಬಗ್ಗೆ ವಿಚಾರಿಸಿದರೆ ಸಿಬ್ಬಂದಿ ಉಡಾಫೆ ಉತ್ತರ ಕೊಡುತ್ತಾರೆ ಎಂದು ಪೋಷಕರು ಕಿಡಿಕಾರಿದ್ದಾರೆ.