ಕೊಡಗು ಪ್ರಕೃತಿ ವಿಕೋಪ: ಸಿಎಂ ಪರಿಹಾರ ನಿಧಿಗೆ ಶಿವಮೊಗ್ಗ ಕೃಷಿ ವಿವಿಯಿಂದ 7 ಲಕ್ಷ ರೂ. ದೇಣಿಗೆ
ಶಿವಮೊಗ್ಗ, ಡಿ. 8: ಕಳೆದ ಕೆಲ ತಿಂಗಳ ಹಿಂದೆ ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ನೆಲೆ ಕಳೆದುಕೊಂಡ ನಿರಾಶ್ರಿತರ ನೆರವಿಗೆ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು 7 ಲಕ್ಷ ರೂ.ಗಳ ನೆರವಿನ ಚೆಕ್ ಅನ್ನು ವಿವಿಯ ಕುಲಪತಿ ಡಾ.ಎಂ.ಕೆ.ನಾಯಕ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಖುದ್ದಾಗಿ ಅರ್ಪಿಸಿದರು.
ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಆಗಸ್ಟ್ ತಿಂಗಳ ವೇತನದಲ್ಲಿ ಒಂದು ದಿನದ ವೇತನವನ್ನು ಕಡಿತಗೊಳಿಸಲಾಗಿತ್ತು. ಸದರಿ ಮೊತ್ತವನ್ನು ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ ಉಂಟಾದ ಪಕೃತಿ ವಿಕೋಪದ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿವಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಪರವಾಗಿ ಸಿಎಂಗೆ ಅರ್ಪಿಸಲಾಯಿತು ಎಂದು ಕುಲಪತಿ ಡಾ. ಎಂ.ಕೆ.ನಾಯ್ಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಮತ್ತುತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿಸ್ತರಣಾ ನಿರ್ದೇಶಕರಾದ ಡಾ.ಟಿ.ಹೆಚ್.ಗೌಡ, ಬೋಧಕ ಮತ್ತು ಬೋಧಕೇತರ ಸಂಘದ ಅಧ್ಯಕ್ಷರಾದ ಡಾ. ನಾರಾಯಣಸ್ವಾಮಿ ಎಮ್. ಮತ್ತು ಡಾ.ಜ್ಞಾನೇಶ್ ಎ.ಯು., ಹಾಗೂ ಡಾ. ಶಂಕರ್, ಲೋಹಿತ್ ಪ್ರಶಾಂತ್ ಮೊದಲಾದವರಿದ್ದರು.