ತುಮಕೂರು: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ; ವಿದ್ಯಾರ್ಥಿ ಮೃತ್ಯು

Update: 2018-12-08 13:40 GMT

ತುಮಕೂರು,ಡಿ.8: ಶಾಲೆ ಮುಗಿಸಿ, ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಕಾರು ಢಿಕ್ಕಿ ಹೊಡೆದು 9 ನೇ ತರಗತಿಯ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದ್ದು, ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರ ನಿರ್ಲಕ್ಷವೇ ಕಾರಣ ಎಂದು ಅರೋಪಿಸಿ ಶಿಕ್ಷಕರ ವಿರುದ್ಧ ಬಾಲಕನ ಪೋಷಕರು ಹಾಗೂ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಹೊನ್ನುಡಿಕೆ ಹ್ಯಾಂಡ್‍ಪೋಸ್ಟ್ ಬಳಿ ಇರುವ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಧನುಷ್ ಇಂದು ಶಾಲೆ ಮುಗಿಸಿಕೊಂಡು ರಸ್ತೆ ದಾಟುವ ವೇಳೆ ತುಮಕೂರು ಕಡೆಯಿಂದ ಬಂದ ಕಾರೊಂದು ಸೈಕಲ್‍ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದೇ ಜಾಗದಲ್ಲಿ ನಡೆಯುತ್ತಿರುವ ಮೂರನೇ ಅಪಘಾತ ಇದಾಗಿದ್ದು, ಪದೇ ಪದೇ ಅಪಘಾತವಾಗಲು ಶಾಲೆಯ ಮುಖ್ಯೋಪಾಧ್ಯಾಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಪೋಷಕರು ಹಾಗೂ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಯಕರ್ತರು ಶಾಲೆಯ ಬಳಿ ಪ್ರತಿಭಟನೆ ನಡೆಸಿದರು. 

'ಶಾಲೆ ತುಮಕೂರು ಕುಣಿಗಲ್ ರಸ್ತೆಗೆ ಹೊಂದಿಕೊಂಡಂತೆ ಇದ್ದು, ಶಾಲೆಯ ಹಿಂದೆ, ಮುಂದೆ ರಸ್ತೆಗೆ ಹಂಪ್ಸ್ ಹಾಕದ ಕಾರಣ ವಾಹನಗಳು ವೇಗವಾಗಿ ಚಲಿಸುವುದರಿಂದ ಶಾಲೆಯಿಂದ ರಸ್ತೆಗೆ ಬರುವ ಮಕ್ಕಳಿಗೆ ಢಿಕ್ಕಿಯಾಗುವುದು ಸಾಮಾನ್ಯವಾಗಿದೆ. ಇದು ಮೂರನೇ ಅಪಘಾತವಾಗಿದ್ದು, ಮಕ್ಕಳು ಸಾವು, ನೋವು ಅನುಭವಿಸುತ್ತಿದ್ದಾರೆ. ಶಾಲೆಯ ಹತ್ತಿರ ರಸ್ತೆಗೆ ಒಂದು ನಾಮಫಲಕವೂ ಇಲ್ಲ. ಯಾವುದೇ ಎಚ್ಚರಿಕೆಯ ಸೂಚನೆ ಇಲ್ಲದ ಕಾರಣ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಶಾಲಾ ಮುಖ್ಯ ಶಿಕ್ಷಕರಾದ ನಾಗಮಣಿ ಗಮನಹರಿಸದ ಕಾರಣ ಮಕ್ಕಳು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಕಾರ್ಯದರ್ಶಿ ಜಿ.ಆರ್.ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಮತ್ತು ಬಿಇಓ ಅವರು ಜಿ.ಪಂ.ಸಿಇಓ ತುಳಿಸಿ ಮದಿನೇನಿ ಇದ್ದಾಗ ಹಂಪ್ಸ್ ನಿರ್ಮಿಸುವಂತೆ ಮನವಿ ಮಾಡಿದ್ದೇವೆ. ಆದರೆ ಹಂಪ್ಸ್ ನಿರ್ಮಾಣವಾಗಿಲ್ಲ. ಮತ್ತೊಮ್ಮೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News