ಪಿರಿಯಾಪಟ್ಟಣ: ಉಸಿರುಗಟ್ಟಿಸಿ ವೈದ್ಯರ ಹತ್ಯೆ

Update: 2018-12-09 15:38 GMT

ಪಿರಿಯಾಪಟ್ಟಣ, ಡಿ.9: ಮನೆಯಲ್ಲಿ ಒಬ್ಬಂಟಿಯಾಗಿದ್ದ ವೈದ್ಯರೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪದ ಸಮೀಪ ಶನಿವಾರ ರಾತ್ರಿ ನಡೆದಿದೆ ಕುಶಾಲನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಕೊಪ್ಪದ ಬಿ.ಎಂ.ರಸ್ತೆ ಪಕ್ಕದ ನಿವಾಸಿ ಡಾ. ದಿಲೀಪ್(56) ಕೊಲೆಯಾದವರು. ಮೂಲತ ಚಿಕ್ಕಮಂಗಳೂರು ಜಿಲ್ಲೆಯ ಬಾಸನ್‌ಖಾನ್ ಗ್ರಾಮದ ಸಣ್ಣರಾಮೆಗೌಡ ಎಂಬವರ ಪುತ್ರ ಡಾ. ದಿಲೀಪ್ ಅವರು ಎಂದಿನಂತೆ ಶನಿವಾರ ರಾತ್ರಿ ಕುಶಾಲನಗರದ ಕ್ಲಿನಿಕ್‌ನಿಂದ ಮನೆಗೆ ಬಂದಿದ್ದರು. ಅವಿವಾಹಿತರಾಗಿರುವ ಡಾ. ದಿಲೀಪ್ ನಿತ್ಯ ವಾಯುವಿಹಾರಕ್ಕೆ ತೆರಳುತ್ತಿದ್ದರು. ಆದರೆ ರವಿವಾರ ಕಾಣಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತರ ಕೈ, ಕಾಲುಗಳನ್ನು ಕಟ್ಟಿ ಹಾಕಲಾಗಿದ್ದು ಬಾಯಿಗೆ ಟೇಪ್ ಸುತ್ತಲಾಗಿತ್ತು.

ಮೃತದೇಹದ ಸುತ್ತ ಖಾರಪುಡಿ ಕಂಡುಬಂದಿದೆ. ಇವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಅವರ ಬಳಿಯಿದ್ದ ಹಣ ಕಳವು ಮಾಡುವ ಉದ್ದೇಶದಿಂದ ಈ ಕೊಲೆ ನಡೆದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ಡಿವೈಎಸ್ಪಿ ಭಾಸ್ಕರ್‌ರೈ, ವೃತ್ತ ನಿರೀಕ್ಷಕ ಪ್ರದೀಪ್, ಠಾಣಾಧಿಕಾರಿಗಳಾದ ಸವಿ.ಸಿ.ಯು, ಲೊಕೇಶ್, ಗಣೇಶ್, ಸಿಬ್ಬಂದಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು. ಮೃತರ ಸಹೋದರ ಪರಮೇಶ್ವರ್ ನೀಡಿರುವ ದೂರಿನಂತೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News